ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್.ಮೆಂಡನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ದಕ್ಷಿಣ ಕನ್ನಡ ಮೊಗವೀರ ಹಿತಸಾಧನಾ ವೇದಿಕೆ ಆಗ್ರಹಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಪುಷ್ಪರಾಜ್ ಕೋಟ್ಯಾನ್, ರಾಜ್ಯದಲ್ಲಿ ಗಂಗಾಮತ ಹಾಗೂ ಮೊಗವೀರ ಸಮುದಾಯಕ್ಕೆ ಸೇರಿದ 39 ಪಂಗಡಗಳಿದ್ದು, 80 ಲಕ್ಷ ಜನಸಂಖ್ಯೆ ಇದೆ. ಸಮುದಾಯದ ಮತದಾರರು ಬಹುತೇಕ ಬಿಜೆಪಿ ಪರವಾಗಿದೆ. ಆದರೂ ಸಮುದಾಯದ ನಾಯಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತರ ರಾಜ್ಯಗಳಲ್ಲಿ ಸಮುದಾಯದ ನಾಯಕರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಲಾಗಿದೆ. ರಾಜ್ಯದಲ್ಲೂ ಹಿಂದೆ ಮೀನುಗಾರ ಸಮುದಾಯದ ನಾಯಕರಿಗೆ ಅವಕಾಶಗಳನ್ನು ನೀಡಲಾಗಿದೆ. ಸಧ್ಯ ಮೀನುಗಾರರ ಸಮುದಾಯದಿಂದ ಲಾಲಾಜಿ ಮೆಂಡನ್ ಶಾಸಕರಾಗಿದ್ದು, ಅವರಿಗೆ ಸಚಿವ ಸ್ಥಾನ ಕೊಡದೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಮೀನುಗಾರರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಲಾಲಾಜಿ ಅವರು 3 ಬಾರಿ ಶಾಸಕರಾಗಿದ್ದು, ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಲ್ಲಿ ಸಚಿವ ಸ್ಥಾನ ನೀಡಬೇಕು. ಈ ಮೂಲಕ ಮೀನುಗಾರರ ಸಮುದಾಯಕ್ಕೆ ನ್ಯಾಯ ನೀಡಬೇಕು ಎಂದು ಪುಷ್ಪರಾಜ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ದೇವಿಪ್ರಸಾದ್ ಹೆಜಮಾಡಿ, ಸಮುದಾಯದ ಮುಖಂಡರಾದ ದಾಮೋದರ ಸುವರ್ಣ, ಮನೋಜ್ ಕಾಂಚನ್, ಲಕ್ಷ್ಮಣ್, ಸೋಮನಾಥ ಸುವರ್ಣ ಇದ್ದರು.