ಪಡುಬಿದ್ರಿ: ‘ಜನರಲ್ಲಿ ಉತ್ಸಾಹ ತುಂಬುವ ದೃಷ್ಟಿಕೋನದಿಂದ ಹೊಸ ಹೊಸ ಚಿಂತನೆಗಳ ಮೂಲಕ ಇತರ ಸಹಕಾರ ಸಂಘಗಳಿಗಿಂತ ಪಡುಬಿದ್ರಿ ಸಹಕಾರ ಸಂಘ ಮಾದರಿಯಾಗಿದೆ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಶ್ಲಾಘಿಸಿದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಆಶ್ರಯದಲ್ಲಿ ಸಹಕಾರ ಸಂಗಮ ವೈ.ಲಕ್ಷ್ಮಣ್ ಸಭಾಂಗಣದಲ್ಲಿ ಸೋಮವಾರ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಸದಾ ಸಕಾರಾತ್ಮಕ ಬದಲಾವಣೆಯೊಂದಿಗೆ ಶಿಸ್ತುಬದ್ಧವಾಗಿ ಜನಪರವಾಗಿ ಕಾರ್ಯನಿರ್ವಹಿಸುವ ಪಡುಬಿದ್ರಿ ಸೊಸೈಟಿಯು ಆದಷ್ಟು ಶೀಘ್ರ ₹ 150 ಕೋಟಿ ಠೇವಣಾತಿ ಸಂಗ್ರಹಿಸುವ ಮೂಲಕ ಮತ್ತೊಂದು ಪ್ರಶಸ್ತಿಗೆ ಭಾಜನವಾಗಲಿ ಎಂದು ಹೇಳಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ರೈತರಿಗೆ ಪ್ರಾಶಸ್ತ್ಯ ನೀಡಿ, ಸಹಕಾರ ಸಪ್ತಾಹವನ್ನು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಸೊಸೈಟಿ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು.
ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಐ. ದೇವಿಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಿರೀಶ್ ಪಲಿಮಾರ್, ಎ. ರಾಮಚಂದ್ರ ಆಚಾರ್ಯ ಅವರನ್ನು ಅಭಿನಂದಿಸಲಾಯಿತು.
ಸಹಾಯ ಧನ ವಿತರಣೆ: ಸೊಸೈಟಿ ವ್ಯಾಪ್ತಿಯ ರೈತರಿಗೆ ಕೃಷಿ ಸಹಾಯಧನ, ಪಡುಬಿದ್ರಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಪಲಿಮಾರು ಶಾಲೆಗೆ ನೆರವು, ವೈಟ್ಲಿಪ್ಟರ್ ಯಶಸ್ವಿನಿ ವಿ. ಭಂಡಾರಿಗೆ ಸಹಾಯಧನ, ಅವರಾಲು ಅಂಗನವಾಡಿಗೆ 25 ಕುರ್ಚಿಕ್ಕೆ ವಿತರಿಸಲಾಯಿತು. ಸಾರ್ವಜನಿಕ ಉಪಯೋಗಕ್ಕೆ ಶೀತಲೀಕರಣ ಶವ ಪೆಟ್ಟಿಗೆ ಹಸ್ತಾಂತರಿಸಲಾಯಿತು. ಉಡುಪಿ ಜಿಲ್ಲಾ ಕೃಷಿಕ ಸಂಘ ಅಧ್ಯಕ್ಷ ರಾಮಕೃಷ್ಣ ಬಂಟಕಲ್ ದಿಕ್ಸೂಚಿ ಭಾಷಣ ಮಾಡಿದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ವೈ ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿ, ‘69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ರಾಷ್ಟ್ರದಾದ್ಯಂತ ನ.14ರಿಂದ 20 ರವರೆಗೆ ಆಯೋಜಿಸಲಾಗಿದೆ. ಇದು ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ನಡೆಯುತಿದೆ’ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜಿ. ಎನ್. ಕುಂದಾಪುರ ಉಪವಿಭಾಗ ಸಹಾಯಕ ಉಪನಿಬಂಧಕಿ ಲಾವಣ್ಯ ಕೆ. ಆರ್., ಉಪಸ್ಥಿತರಿದ್ದರು. ಸುಧೀರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಶೇರಿಗಾರ್ ನಿರೂಪಿಸಿದರು. ಸೊಸೈಟಿ ಉಪಾಧ್ಯಕ್ಷ ಗುರುರಾಜ ಪೂಜಾರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.