ಉಡುಪಿ: ‘ಕನಕದಾಸರ ಕೀರ್ತನೆ ಹಾಗೂ ಸಾಹಿತ್ಯದ ಅನುಸರಣೆ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸಲು ಸಹಕಾರಿ’ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಅಜ್ಜರಕಾಡು ಗೋವಿಂದ ಕಲ್ಯಾಣ ಮಂಟಪದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ ಹಾಗೂ ಹಾಲುಮತ ಮಹಾಸಭಾದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಕನಕದಾಸರಿಗೂ ಉಡುಪಿಗೂ ಅವಿನಾಭಾವ ಸಂಬಂಧವಿದೆ. ಕಾಗಿನೆಲೆಯಿಂದ ಉಡುಪಿಗೆ ಕೃಷ್ಣನನ್ನು ಹುಡುಕಿ ಬಂದ ಕನಕದಾಸರ ಭಕ್ತಿಯ ಪರಾಕಾಷ್ಠೆಗೆ ಶ್ರೀಕೃಷ್ಣನೇ ಪಶ್ಚಿಮಾಭಿಮುಖವಾಗಿ ತಿರುಗಿ ದರ್ಶನ ನೀಡಿರುವುದರಿಂದ ಕನಕನ ಕಿಂಡಿ ಎಂದೇ ವಿಶ್ವಪ್ರಸಿದ್ಧಿಯಾಗಿದೆ. ಉಡುಪಿಗೂ ಕನಕದಾಸನಿಗೂ ಸಂಬಂಧ ಬೆಸೆದುಕೊಂಡಿದೆ. ಆದಿ ಕೇಶವನನ್ನು ಒಲಿಸಿಕೊಳ್ಳಲು ಕೀರ್ತನೆಗಳನ್ನು ರಚಿಸುವ ಮೂಲಕ ರಾಜ್ಯದಲ್ಲಿ ಹರಿದಾಸ ಆಂದೋಲನಕ್ಕೆ ಶಕ್ತಿ ತುಂಬಿದವರು ಕನಕದಾಸರು. ನಾಡಿನಾದ್ಯಂತ ಸಂಚರಿಸಿ, ಶಿಕ್ಷಣವೇ ಇಲ್ಲದಂತಹ ಹಾಲುಮತ ಸಮಾಜಕ್ಕೆ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಕನಕದಾಸರು ಮಾಡಿದರು ಎಂದರು.
ಸಮಾಜದಲ್ಲಿ ತುಳಿತಕ್ಕೆ ಒಳಗಾದ ವ್ಯಕ್ತಿ ಭಕ್ತಿ ಹಾಗೂ ಸಮಾಜ ತಿದ್ದುವ ಕೀರ್ತನೆಗಳಿಂದ ಪೂಜಿಸಲ್ಪಡುತ್ತಿದ್ದಾರೆ. ಹುಟ್ಟುವ ಜಾತಿ ಮುಖ್ಯವಲ್ಲ. ಮಾಡುವ ಕೆಲಸ ಮತ್ತು ಅನುಸರಿಸುತ್ತಿರುವ ದಾರಿ ಮುಖ್ಯ ಎಂದು ಸಮಾಜಕ್ಕೆ ಕನಕದಾಸರು ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಪ್ರಸನ್ನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅರುಣ್, ಕನಕದಾಸ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷ ಹನುಮಂತ ಡೊಳ್ಳಿನ, ಹಾಲುಮತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಎಚ್.ಐಹೊಳೆ ಮತ್ತು ಸಮಾಜದ ಪದಾಧಿಕಾರಿಗಳು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಕಟೀಲು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರದೀಪ್ ಡಿ.ಎಂ. ಹಾವಂಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಾಹಿತ್ಯ ಲೋಕಕ್ಕೆ ಕನಕದಾಸರ ಕೊಡುಗೆ ಅಪಾರ ಸಮಾಜ ಪರಿವರ್ತನೆಗೆ ಕೀರ್ತೆನೆಯನ್ನೇ ಮಾಧ್ಯಮವನ್ನಾಗಿ ಬಳಸಿಕೊಂಡ ಕನಕದಾಸರು ಹರಿದಾಸ ಆಂದೋಲನಕ್ಕೆ ಶಕ್ತಿ ತುಂಬಿದವರು ಕನಕದಾಸರು
ಕನಕದಾಸರು ಜಾತಿಗೆ ಸೀಮಿತರಾದವರಲ್ಲ; ಭಜನೆ ಮತ್ತು ಕೀರ್ತನೆಯ ಮೂಲಕ ಸಮಾಜ ಸರಿದಾರಿಯಲ್ಲಿ ಸಾಗಲು ಸಂದೇಶಗಳನ್ನು ನೀಡಿದವರು. ಅವರ ಮಾರ್ಗದಲ್ಲಿ ನಡೆದಾಗ ಉತ್ತಮ ಸಮಾಜ ನಿರ್ಮಾಣವಾಗಲಿದೆಶೋಭಾ ಕರಂದ್ಲಾಜೆ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.