ಉಡುಪಿ: ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ಪಲ್ಲಕ್ಕಿ ಹೊತ್ತವರನ್ನು ಮುಟ್ಟಿದ್ದಕ್ಕೆ ಪರಿಶಿಷ್ಟ ಜಾತಿಯ ಬಾಲಕನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವುದು ಖೇದಕರ. ಯಾವುದೇ ಧರ್ಮ ಗ್ರಂಥಗಳು ಈ ನಡೆಯನ್ನು ಒಪ್ಪುವುದಿಲ್ಲ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಉತ್ಸವಗಳು ಗ್ರಾಮದ ಎಲ್ಲರಿಗೂ ಸಂಬಂಧಪಟ್ಟಿದ್ದು. ಬಹಿಷ್ಕಾರದಂತಹ ಘಟನೆಗಳು ನಡೆಯಬಾರದು. ಬಹಿಷ್ಕಾರದಂತಹ ಕೃತ್ಯಗಳಲ್ಲಿ ಭಾಗಿಯಾದವರನ್ನು ಶಿಕ್ಷಿಸಿದರೆ ಸಾಲದು, ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದ್ದಾರೆ.
ಉಗ್ರರ ಬಂಧನ ಆತಂಕಕಾರಿ
ಶಿವಮೊಗ್ಗ ಜಿಲ್ಲೆಗೆ ಉಗ್ರರ ಪ್ರವೇಶ ಆತಂಕಕಾರಿ. ಹಿಂದೆ ಮಂಗಳೂರು ಉಡುಪಿ ಪರಿಸರದಲ್ಲಿಯೂ ಉಗ್ರರ ಇರುವಿಕೆ ಪತ್ತೆಯಾಗಿತ್ತು. ಸರ್ಕಾರ ಕೂಂಬಿಂಗ್ ಮಾದರಿಯಲ್ಲಿ ಉಗ್ರರ ಸೆರೆ ಕಾರ್ಯಾಚರಣೆ ನಡೆಸಬೇಕು. ಉಗ್ರರಿಂದ ಯಾರಿಗೂ ನೆಮ್ಮದಿ ಇಲ್ಲವಾಗಿದ್ದು, ಘಟನೆಗೆ ಕೋಮಿನ ಬಣ್ಣ ನೀಡಬಾರದು. ಸಮಾಜದಲ್ಲಿ ಶಾಂತಿ ಕದಡುವಂತಹ ಪ್ರಯತ್ನಗಳನ್ನು ನಿಗ್ರಹಿಸಬೇಕು ಎಂದು ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದ್ದಾರೆ.