ಉಡುಪಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು, ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ರಕ್ಷಿಸಿದ ಉಡುಪಿ ನಗರ ಠಾಣೆ ಪಿಎಸ್ಐ (ಅಪರಾಧ) ಸದಾಶಿವ ಆರ್. ಗವರೋಜಿ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕುಕ್ಕಿಕಟ್ಟೆಯ ಮಾರ್ಪಳ್ಳಿಯಲ್ಲಿ ಗುರುವಾರ ವೃದ್ಧೆ ಬಾವಿಗೆ ಬಿದ್ದಿರುವುದನ್ನು ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದರು. ಸಮೀಪದಲ್ಲಿ ಗಸ್ತಿನಲ್ಲಿದ್ದ ಪಿಎಸ್ಐ ಸದಾಶಿವ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬಂದು, ಖುದ್ದು ಬಾವಿಗಿಳಿದು ರಕ್ಷಣೆಗೆ ಮುಂದಾದರು.
ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ್ ಹಾಗೂ ಆಟೊ ಚಾಲಕ ರಾಜೇಶ್ ನಾಯಕ್ ರಕ್ಷಣಾ ಕಾರ್ಯಕ್ಕೆ ಜೊತೆಯಾದರು. ಅಂತಿಮವಾಗಿ ವೃದ್ಧೆಯನ್ನು ಬಾವಿಯಿಂದ ಸುರಕ್ಷಿತವಾಗಿ ಮೇಲೆತ್ತಿ ರಕ್ಷಣೆ ಮಾಡಲಾಯಿತು. ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಮಾಹಿತಿ ನೀಡಿದ ಪಿಎಸ್ಐ ಸದಾಶಿವ, ‘ಕಾನೂನು ಸುವ್ಯವಸ್ಥೆ ಜತೆಗೆ ನಾಗರಿಕರ ರಕ್ಷಣೆ ಹೊಣೆಯೂ ಕರ್ತವ್ಯದ ಭಾಗವಾಗಿರುವುದರಿಂದ ವೃದ್ಧೆಯ ರಕ್ಷಣೆಗೆ ಬಾವಿಗಿಳಿಯಬೇಕಾಯಿತು. ಇದರಲ್ಲಿ ಹೆಚ್ಚುಗಾರಿಕೆ ಏನಿಲ್ಲ’ ಎಂದರು.