ಉಡುಪಿ: ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವ ಪರಿಣಾಮ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಭರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕ್ಯಾಂಪಸ್ ಫ್ಂಟ್ ಆಫ್ ಇಂಡಿಯಾ ಸಂಘಟನೆಯ ಮುಖಂಡ ಇಲಿಯಾಸ್ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಿಎಚ್ಡಿ ಹಾಗೂ ಎಂಫಿಎಲ್ ಫೆಲೊಶಿಪ್ ಅನುದಾನವನ್ನು ₹25,000ದಿಂದ ₹ 10,000ಕ್ಕೆ ಇಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೀರಾ ತೊಂದರೆಯಾಗಿದೆ ಎಂದರು.
ಅಲ್ಪಸಂಖ್ಯಾತರ ಇಲಾಖೆಯಿಂದ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ವಿದ್ಯಾಸಿರಿ ಸೇರಿದಂತೆ ಹಲವು ವಿದ್ಯಾರ್ಥಿ ವೇತನ ಕಾರ್ಯಕ್ರಮಗಳಿದ್ದು, ಅರ್ಜಿ ಹಾಕಿ 2–3 ವರ್ಷವಾದರೂ ವಿಲೇವಾರಿ ಮಾಡಿಲ್ಲ. ಸ್ಕಾಲರ್ಶಿಪ್ ಮಂಜೂರಾಗಿದ್ದರೂ ಖಾತೆಗೆ ಹಣ ಬಂದಿಲ್ಲ. ಪರಿಣಾಮ ದಾಖಲಾತಿ ಶುಲ್ಕ ಕಟ್ಟಲಾಗದೆ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿರೋಧಿ ನಡೆ ಖಂಡಿಸಿ ಕ್ಯಾಂಪಸ್ ಫ್ಂಟ್ ಆಫ್ ಇಂಡಿಯಾ ಸಂಘಟನೆರಾಜ್ಯದಾದ್ಯಂತ ‘ಸ್ಕಾಲರ್ಶಿಪ್ ಕೊಡಿ’ ಅಭಿಯಾನ ಹಮ್ಮಿಕೊಂಡಿದೆ. ನ.21ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಸರ್ಕಾರ ಸ್ಕಾಲರ್ಶಿಪ್ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು, ವಿದ್ಯಾರ್ಥಿ ವೇತನಕ್ಕಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಶೀಘ್ರ ವಿಲೇ ಮಾಡಬೇಕು. ಪಿಎಚ್.ಡಿ, ಎಂಫಿಎಲ್ ಫೆಲೊಶಿಪ್ ಕಡಿತ ನಿರ್ಧಾರ ಹಿಂಪಡೆಯಬೇಕು. ವಿದ್ಯಾರ್ಥಿ ವೇತನ ದುರುಪಯೋಗ ತಡೆಯಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ನವಾಜ್ ಶೇಖ್, ಜಿಶಾನ್, ಒಸಾಮ, ಜಮ್ಜಮ್ ಇದ್ದರು.