ಉಡುಪಿ: ಎರಡು ದಿನಗಳಿಂದ ಅಬ್ಬರಿಸಿದ್ದ ಮಳೆ ಭಾನುವಾರ ಕ್ಷೀಣವಾಗಿತ್ತು. ಜಿಲ್ಲೆಯಾದ್ಯಂತ ಸಾಧಾರಣವಾಗಿ ಮಳೆ ಬಿದ್ದಿದೆ. ಆದರೆ, ಕಾಪು ತಾಲ್ಲೂಕಿನಲ್ಲಿ ಕಡಲ್ಕೊರೆತ ಶುರುವಾಗಿದೆ.
ಗಾಳಿ ಮಳೆಗೆ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ದೈತ್ಯ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿರುವುದರಿಂದ ಎರ್ಮಾಳು, ತೆಂಕ, ನಡಿಪಟ್ಣ, ಕಾಡಿಪಟ್ಣ ಹಾಗೂ ಪಡುಬಿದ್ರಿಯಲ್ಲಿ ಕಡಲ್ಕೊರೆತ ಉಂಟಾಗಿದೆ. ತೀರದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 6.6 ಸೆ.ಮೀ ಮಳೆಯಾಗಿದೆ.
ಯಲ್ಲೊ ಅಲರ್ಟ್: ಮುಂದಿನ ಮೂರ್ನಾಲ್ಕು ದಿನ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಯಲ್ಲೊ ಅಲರ್ಟ್ ಘೋಷಿಸಿದೆ.
ಶನಿವಾರ ಸುರಿದ ಭಾರಿ ಮಳೆಗೆ ಬಿದ್ದಿದ್ದ ಮರಳಗಳನ್ನು ಭಾನುವಾರ ಮೆಸ್ಕಾಂ ಸಿಬ್ಬಂದಿ ತೆರವುಗೊಳಿಸಿ, ವಿದ್ಯುತ್ ಕಂಬಗಳನ್ನು ಮರುಸ್ಥಾಪಿಸಿದರು.