ಬ್ರಹ್ಮಾವರ: ಹಿಂದೂ ಸಂಸ್ಕೃತಿ, ಪುರಾಣಗಳ ಬಗ್ಗೆ ತಿಳಿಯಲು ಯಕ್ಷಗಾನ ಮಾಧ್ಯಮ. ಅದು ಇಂದು ಕರಾವಳಿಗೆ ಮಾತ್ರ ಸೀಮಿತವಾಗದೆ ವಿಶ್ವಕ್ಕೆ ಪಸರಿಸಿರುವುದು ಅದರ ಶ್ರೀಮಂತಿಕೆಗೆ ಸಾಕ್ಷಿ ಎಂದು ಹೈದರಾಬಾದ್ನ ಹೋಟೇಲ್ ಉದ್ಯಮಿ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಹೇಳಿದರು.
ಉಪ್ಪೂರು ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಉಪ್ಪೂರು ತೆಂಕಬೆಟ್ಟಿನ ವಿನಾಯಕ ಯಕ್ಷಗಾನ ಸಂಘದ 41ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಟಪಾಡಿಯ ಶ್ರೀನಿಕೇತನ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಅಶೋಕ ಕುಮಾರ್ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲಿತ ಮಕ್ಕಳು ಕನ್ನಡವನ್ನು ನಿರರ್ಗಳವಾಗಿ ಮಾತನಾಡುತ್ತಾರ, ಬರೆಯುತ್ತಾರೆ. ಇದು ಈ ಕಲೆಗಿರುವ ಶಕ್ತಿ ಎಂದರು.
ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರದ ಗುರು ಕೃಷ್ಣಮೂರ್ತಿ ಭಟ್ ಬಗ್ವಾಡಿ ಅವರಿಗೆ ದಿ.ಯು. ಶಿವರಾಮ ಕಲ್ಕೂರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ಗುರು ಕರ್ಜೆ ಶ್ರೀಧರ್ ಹೆಬ್ಬಾರ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಂಘದ ಹಿತೈಷಿ ಗ್ರಾಮ ಪಂಚಾಯಿತಿ ಸದಸ್ಯ ಅವಿನಾಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಸಂಘದ ಗೌರವಾಧ್ಯಕ್ಷ ವೆಂಕಟೇಶ್ ಕ್ರಮಧಾರಿ, ಅಧ್ಯಕ್ಷ ಲಕ್ಷ್ಮಿಕಾಂತ್ ನಾಯಕ್ ಇದ್ದರು. ರಾಘವೇಂದ್ರ ಭಟ್ ನಿರೂಪಿಸಿದರು. ಸಂಘದ ಹಿರಿಯ ಸದಸ್ಯರಿಂದ ‘ಕೃಷ್ಣಲೀಲಾಮೃತ’ ಹಾಗೂ ಬಾಲ ಕಲಾವಿದರಿಂದ ‘ಗಯ ಚರಿತ್ರೆ’ ಯಕ್ಷಗಾನ ಪ್ರದರ್ಶನ ನಡೆಯಿತು.