ಶಿರಸಿ: ಯಕ್ಷಗಾನ ಶ್ರೀಮಂತ ಕಲೆ. ಹೀಗಾಗಿ ಇದನ್ನು ಪ್ರತಿಯೊಬ್ಬ ಕಲಾವಿದರೂ ಹೃದಯ ಶ್ರೀಮಂತರು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದರು.
ಇಲ್ಲಿನ ಟಿ.ಆರ್.ಸಿ. ಸಭಾಂಗಣದಲ್ಲಿ ಭಾನುವಾರ ಯಕ್ಷಗಾನ ಅಕಾಡೆಮಿ ಆಯೋಜಿಸಿದ್ದ 2020ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಯಕ್ಷಗಾನ ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ಕಲೆ. ಅದು ಇರುವವರೆಗೆ ಕನ್ನಡ ಸಂಸ್ಕೃತಿಗೆ ಧಕ್ಕೆ ಬಾರದು.ಪಾರಂಪರಿಕ ಯಕ್ಷಗಾನ ಹೊಸತನಗಳ ದಾಳಿ ಸಹಿಸಿಕೊಂಡು ಉಳಿದಿದೆ. ಜನರು ಕಲಾವಿದರನ್ನು ಪ್ರೀತಿಸಿ ಉಳಿಸಿದ್ದಾರೆ’ ಎಂದರು.
‘ಅಕಾಡೆಮಿಯಿಂದ ದತ್ತಿನಿಧಿ ಪ್ರಶಸ್ತಿ ನೀಡುವ ಚಿಂತನೆ ಇದೆ. ಯಕ್ಷಗಾನದ ವಿಶ್ವಕೋಶ ಸ್ಥಾಪನೆ ಗುರಿ ಇದ್ದು, ಈಗಾಗಲೆ ಸಭೆ ನಡೆಸಿ ವಿಧ್ವಾಂಸರ ಜತೆ ಚರ್ಚಿಸಲಾಗಿದೆ’ ಎಂದರು.
ಪಾರ್ತಿಸುಬ್ಬ ಪ್ರಶಸ್ತಿ ಸ್ವೀಕರಿಸಿದ ಯಕ್ಷಗಾನ ಅರ್ಥಧಾರಿ ಡಿ.ಎಸ್.ಶ್ರೀಧರ, ‘ಯಕ್ಷಗಾನದ ವಾಲ್ಮೀಕಿ ಎಂದು ಹೆಸರಾದ ಪಾರ್ತಿಸುಬ್ಬ ಹೆಸರಿನಲ್ಲಿ ಪ್ರಶಸ್ತಿ ಸಿಕ್ಕಿದ್ದು ಸಂತಸ ತಂದಿದೆ. ಪ್ರಶಸ್ತಿ ಏರಬೇಕಾದ ಎತ್ತರದ ಬಗ್ಗೆ ಎಚ್ಚರಿಸಿದೆ. ಜವಾಬ್ದಾರಿಯ ಮಹತ್ವವನ್ನು ತಿಳಿಸಿದೆ’ ಎಂದರು.
ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರ ಪರವಾಗಿ ವಿಟ್ಲ ಶಂಭು ಶರ್ಮ, ಗೋಪಾಲ ಆಚಾರ್ಯ, ಡಾ.ವಿಜಯನಳಿನಿ ರಮೇಶ, ಎಂ.ಆರ್.ಹೆಗಡೆ ಕಾನಗೋಡ, ಸುಬ್ರಹ್ಮಣ್ಯ ಧಾರೇಶ್ವರ, ಬಿ.ಪರಶುರಾಮ ಮಾತನಾಡಿದರು. ಜಿ.ಎಸ್.ಭಟ್ ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆಗೊಳಿಸಿದರು.
ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಅಕಾಡೆಮಿ ಸದಸ್ಯ ಸಂಚಾಲಕಿ ನಿರ್ಮಲಾ ಹೆಗಡೆ ಗೋಳಿಕೊಪ್ಪ, ಅಕಾಡೆಮಿ ಸದಸ್ಯರಾದ ದಿವಾಕರ ಹೆಗಡೆ, ಆರತಿ ಪಟ್ರಮೆ, ಶ್ರೀನಿವಾಸ ಸಾಸ್ತಾನ, ಕೆ.ಎಂ.ಶೇಖರ, ಮಾಧವ ಭಂಡಾರಿ ಇದ್ದರು.
ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು.
--------
ಯಕ್ಷಗಾನ ಕ್ಷೇತ್ರದಲ್ಲಿ ಹಿಂದಿನಂತೆ ಹೃದಯವಂತಿಕೆ ವಾತಾವರಣ ಮೂಡಬೇಕು. ಆರ್ಥಿಕತೆಯ ಬದಲು ಕಲಾವಿದರು ಕಲೆಯ ಗೌರವ ಉಳಿಸುವ ಚಿಂತನೆ ಮಾಡಬೇಕು.