ಶಿರಸಿ: ಅತಿವೃಷ್ಟಿಯಿಂದ ಹಾನಿಗೊಳಗಾದ ಶಿರಸಿ, ಸಿದ್ದಾಪುರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಭೇಟಿ ನೀಡುತ್ತಿದ್ದಾರೆ.
ತಾಲ್ಲೂಕಿನ ರೇವಣಕಟ್ಟಾ, ದೇವನಳ್ಳಿ, ಚಿಂಚಳಿಕೆ, ಮತ್ತಿಘಟ್ಟ, ಮೊಗವಳ್ಳಿ, ಬನವಾಸಿ, ಸಿದ್ದಾಪುರ ತಾಲ್ಲೂಕಿನ ಮುರೂರು, ಕಾನಸೂರು, ಮುಠ್ಠಳ್ಳಿ, ಹೆಮ್ಮನಬೈಲ್ ಸೇರಿದಂತೆ ವಿವಿಧ ಗ್ರಾಮಗಳಿಗೆ ಅವರು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಮಳೆಯಿಂದ ಜಲಾವೃತಗೊಂಡು ಹಾನಿಗೀಡಾದ ಕೃಷಿಭೂಮಿ, ಕುಸಿದ ಮನೆ, ಧರೆ ಕುಸಿತ ಮುಂತಾದ ಹಾನಿಗಳನ್ನು ಪರಿಶೀಲಿಸಿದರು. ಹಲವು ಸಂತ್ರಸ್ತರಿಗೆ ಸ್ವಂತ ವೆಚ್ಚದಲ್ಲಿ ನೆರವು ಒದಗಿಸಿದರು. ತಾತ್ಕಾಲಿಕ ಸೂರು ನಿರ್ಮಿಸಿಕೊಡುವ ಭರವಸೆಯನ್ನೂ ನೀಡಿದರು.
‘ಪ್ರಕೃತಿ ವಿಕೋಪದಿಂದ ಕಂಗೆಟ್ಟಿರುವ ಜನರಿಗೆ ಧೈರ್ಯ ತುಂಬುವ ಕೆಲಸವಾಗಬೇಕು.ಜನರ ಕಷ್ಟದ ಸಮಯದಲ್ಲಿ ಅವರೊಂದಿಗೆ ನಿಂತಿದ್ದೇವೆ. ಮಳೆಯಿಂದ ಸೂರು ಕಳಕೊಂಡವರಿಗೆ ಮನೆ ನಿರ್ಮಿಸಿಕೊಡಬೇಕು. ನಷ್ಟವಾದ ಜಾನುವಾರು, ಕೃಷಿಭೂಮಿ, ಬೆಳೆಗೆ ಸರ್ಕಾರ ಶೀಘ್ರ ಪರಿಹಾರ ಒದಗಿಸಬೇಕು’ ಎಂದು ಭೀಮಣ್ಣ ನಾಯ್ಕ ಹೇಳಿದರು.
ಪ್ರಮುಖರಾದ ಎಸ್.ಕೆ.ಭಾಗವತ, ಬಸವರಾಜ ದೊಡ್ಮನಿ ಇತರರು ಇದ್ದರು.