ಶಿರಸಿ: ತಾಲ್ಲೂಕಿನ ಅಂಡಗಿ ಗುರುಮಠದಲ್ಲಿ ಕಲ್ಲೇಶ್ವರ ಸ್ವಾಮೀಜಿ ಅವರ ಶಿಲಾಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಭಕ್ತ ವೃಂದದ ವತಿಯಿಂದ ಬನವಾಸಿ ಭಗದಲ್ಲಿ ಬುಧವಾರ ಬೃಹತ್ ಬೈಕ್ ರ್ಯಾಲಿ ನಡೆಯಿತು.
ಅಂಡಗಿ ಗುರುಮಠದ ಆವರಣದಲ್ಲಿ ಕಲ್ಯಾಣ ಸ್ವಾಮೀಜಿ ರ್ಯಾಲಿಗೆ ಚಾಲನೆ ನೀಡಿದರು. ಕಲಕರಡಿ, ಹಾಡಲಗಿ, ಬನವಾಸಿ, ನರೂರು, ಮಧುರವಳ್ಳಿ, ಗೋಣೂರು, ಕಂಡ್ರಾಜಿ, ಬೆಡಸಗಾಂವ, ಬಿಸಲಕೊಪ್ಪ, ಉಮ್ಮಡಿ, ಮಾಳಂಜಿ, ಕಿರವತ್ತಿ, ಸೇರಿದಂತೆ ಹಲವು ಗ್ರಾಮಗಳಲ್ಲಿ ರ್ಯಾಲಿ ತೆರಳಿತು.
ಅಂಡಗಿ ಗುರುಮಠದ ಅಧ್ಯಕ್ಷ ಭೀಮಣ್ಣ ನಾಯ್ಕ, ಉಪಾಧ್ಯಕ್ಷ ಸಿ.ಎಫ್.ನಾಯ್ಕ, ಡಾ.ನಾಗೇಶ ನಾಯ್ಕ, ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ಮೇ 14 ರಿಂದ ಪ್ರತಿಷ್ಠಾ ಮಹೋತ್ಸವ:
ಕಲ್ಲೇಶ್ವರ ಸ್ವಾಮೀಜಿ ಅವರ ಶಿಲಾಮೂರ್ತಿ ಪ್ರತಿಷ್ಠಾಪನೆ, ಅಷ್ಟಬಂಧ ಕಾರ್ಯಕ್ರಮ ಮೇ 14 ರಿಂದ 16ರ ವರೆಗೆ ನಡೆಯಲಿದೆ. 14ಕ್ಕೆ ಶಿಲಾಮೂರ್ತಿ ಮೆರವಣಿಗೆ, 15 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 16 ರಂದು ಶಿಲಾಮೂರ್ತಿ ಪ್ರತಿಷ್ಟೆ, ಮಧ್ಯಾಹ್ನ 2.30ಕ್ಕೆ ಧರ್ಮಸಭೆ, ಸಂಜೆ 5 ಗಂಟೆಗೆ ರಥೋತ್ಸವ, ಆ ಬಳಿಕ ದೀಪೋತ್ಸವ ನಡೆಯಲಿದೆ.