ಶಿರಸಿ: ‘ಕೈಯ್ಯಲ್ಲಿ ಸುತ್ತುವ ಚಕ್ಕುಲಿ ರುಚಿ ಮತ್ತು ಹೆಚ್ಚು ಬಾಳಿಕೆಗೆ ಪ್ರಸಿದ್ಧಿ. ಈ ಬಗ್ಗೆ ಯುವ ಪೀಳಿಗೆಗೆ ತಿಳಿಸಿಕೊಡುವ ಜತೆಗೆ ನಶಿಸುತ್ತಿರುವ ಪದ್ಧತಿ ಉಳಿಸಿಕೊಳ್ಳುವ ಅಗತ್ಯವಿದೆ’ ಎಂದು ಪ್ರಗತಿಪರ ಕೃಷಿಕರಾದ ವೇದಾವತಿ ಹೆಗಡೆ ನೀರ್ನಳ್ಳಿ ಅಭಿಪ್ರಾಯಪಟ್ಟರು.
ಇಲ್ಲಿನ ಕದಂಬ ಸೌಹಾರ್ದ ಮಾರ್ಕೆಟಿಂಗ್ ಸಂಸ್ಥೆ ಸಭಾಂಗಣದಲ್ಲಿ ಎರಡು ದಿನಗಳ ಕೈಚಕ್ಕುಲಿ ತಯಾರಿಕೆ ಸ್ಪರ್ಧೆ, ಪ್ರದರ್ಶನ ಮತ್ತು ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕದಂಬ ಸಂಸ್ಥೆಯ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡ, ‘ಕೈಚಕ್ಕಲಿ ಕಂಬಳ ಸಹಬಾಳ್ವೆಯ ಸಂದೇಶ ಸಾರುವ ಜತೆಗೆ ಗ್ರಾಮೀಣ ಭಾಗದ ಸೊಗಡು ಪ್ರದರ್ಶಿಸುತ್ತದೆ. ಉತ್ತಮ ಕೈಚಕ್ಕುಲಿ ತಯಾರಿಕೆ ಪ್ರತಿಭೆಯೂ ಹೌದಾಗಿದ್ದು, ಇದನ್ನು ಪ್ರೋತ್ಸಾಹಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
ಮೂವತ್ತಕ್ಕೂ ಹೆಚ್ಚು ಆಸಕ್ತರು ಸ್ಪರ್ಧೆಯಲ್ಲಿ ಕೈಯ್ಯಲ್ಲಿ ಚಕ್ಕುಲಿ ಸುತ್ತಿದರು. ವಯಸ್ಸಿನ ಭೇದವಿಲ್ಲದೆ ವೃದ್ಧರು, ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.
ಅಕ್ಕಿ ಹಿಟ್ಟಿನ ಹೊರತಾಗಿ ಬೀಟ್ರೂಟ್, ಬೆಳ್ಳುಳ್ಳಿ, ಕ್ಯಾರೆಟ್, ಬಾಳೆಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿಗಳಿಂದ ಸಿದ್ಧಪಡಿಸಿದ್ದ ಇಪ್ಪತ್ತೈದಕ್ಕೂ ಹೆಚ್ಚು ಬಗೆಯ ಚಕ್ಕುಲಿಗಳನ್ನು ಪ್ರದರ್ಶಿಸಲಾಯಿತು.
ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ, ನಿರ್ದೇಶಕರಾದ ಪ್ರತಿಭಾ ಬೆಳಲೆ, ಆಶಾ ಹೆಗಡೆ, ಗಣಪತಿ ಹೆಗಡೆ ಮುರೇಗಾರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.