ಹಾನಗಲ್ನ ಗದುಗೆಪ್ಪ ಪಾಟೀಲ್ ಅವರ ಮನೆಯ ಅಂಗಳಕ್ಕೆ ಎರಡು ದಿನಗಳ ಹಿಂದೆ ಬಂದಿದ್ದ ನಾಗರ ಹಾವನ್ನು ಕಂಡ ಎಂಟು ವರ್ಷದ ಡಾಬರ್ಮನ್ ನಾಯಿ ಹಾವಿನ ಮೇಲೆರಗಿತ್ತು. ನಾಯಿ ಮತ್ತು ಹಾವಿನ ಸೆಣೆಸಾಟದಲ್ಲಿ ಹಾವು ನಾಯಿಯನ್ನು ಕಚ್ಚಿತ್ತು, ನಂತರ ನಾಯಿ ಹಾವನ್ನು ತುಂಡರಿಸಿತ್ತು. ‘ವಿಷದ ಹಾವು ಕಚ್ಚಿದ ಕಾರಣ ನಾಯಿಯ ದೇಹದಲ್ಲಿ ನಂಜು ಏರಿತ್ತು. ಹಾವು ಕಚ್ಚಿ 12 ಗಂಟೆಯ ನಂತರ ಮಾಲೀಕರು ಅದನ್ನು ಆಸ್ಪತ್ರೆಗೆ ತಂದಿದ್ದರು. ಕೋಮಾಕ್ಕೆ ಹೋಗಿದ್ದ ನಾಯಿಗೆ ಚಿಕಿತ್ಸೆ ನೀಡಲಾಯಿತು. ಸತತ ಎಂಟು ತಾಸು ಪ್ರಯತ್ನದ ನಂತರ ನಾಯಿ ಎಚ್ಚರಗೊಂಡಿದೆ. ಶುಕ್ರವಾರ ಬೆಳಿಗ್ಗೆ ನಾಯಿ ಸಂಪೂರ್ಣ ಗುಣಮುಖವಾಗಿದೆ. ಹಾವು ಕಚ್ಚಿದ ಜಾಗದಲ್ಲಿ ಬಾವು ಮಾತ್ರ ಇದೆ’ ಎಂದು ಚಿಕಿತ್ಸೆ ನೀಡಿದ ಪಶುವೈದ್ಯ ಡಾ.ಪಿ.ಎಸ್.ಹೆಗಡೆ ತಿಳಿಸಿದರು.