ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಮುರುಗಲು ಹಣ್ಣು ಬಂಪರ್‌ ಬೆಳೆ, ಕೊಯ್ಲಿನ ಚಿಂತೆಯಿಲ್ಲ

Last Updated 24 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ಬೆಟ್ಟದ ಬೆಳೆಯಾಗಿರುವ ಮುರುಗಲ‌ನ್ನು ಕೃಷಿ ಬೆಳೆಯಾಗಿ ಬೆಳೆದಿರುವ ತಾಲ್ಲೂಕಿನ ಕಾನಗೋಡಿನ ಪ್ರಗತಿಪರ ಕೃಷಿಕ ರಮೇಶ ಹೆಗಡೆ ಅವರು ಈ ಬಾರಿ ಬಂಪರ್ ಫಸಲನ್ನು ಪಡೆದಿದ್ದಾರೆ.

ಮುರುಗಲು ಹಣ್ಣಿನ ಕೊಯ್ಲಿನ ಹಂಗಾಮಿನಲ್ಲೇ ಕೊರೊನಾ ಲಾಕ್‌ಡೌನ್‌ ಬಂದು, ಕೃಷಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಚಿಂತೆಯೂ ಅವರಿಗಿಲ್ಲ. ಓದುತ್ತಿರುವ ಮಕ್ಕಳು ಮನೆಗೆ ಬಂದಿದ್ದಾರೆ. ಹೀಗಾಗಿ ಕುಟುಂಬದ ಸದಸ್ಯರೆಲ್ಲ ಸೇರಿ ಮುರುಗಲು ಹಣ್ಣಿನ ಸಂಸ್ಕರಣೆಯಲ್ಲಿ ತೊಡಗಿದ್ದಾರೆ.

ಕೃಷಿಯಲ್ಲಿ ಹೊಸ ಪ್ರಯೋಗ ನಡೆಸುತ್ತ, ಸಣ್ಣ ಹಿಡುವಳಿಯಲ್ಲೂ ಗರಿಷ್ಠ ಆದಾಯ ಪಡೆಯಬಹುದೆಂದು ಸಾಬೀತುಪಡಿಸಿರುವ ರಮೇಶ ಹೆಗಡೆ, ಗದ್ದೆಯಂಚಿನಲ್ಲಿ 150ರಷ್ಟು ಮುರುಗಲು ಮರಗಳನ್ನು ಬೆಳೆಸಿದ್ದಾರೆ. ಇವುಗಳಲ್ಲಿ ಸುಮಾರು 10 ಮರಗಳು ಬಿಳಿ ಮುರುಗಲು ಜಾತಿಗೆ ಸೇರಿದವು. ನಾಲ್ಕೈದು ದಿನಗಳಿಂದ ಹಣ್ಣು ತುಂಬಿರುವ ಮರಗಳಿಂದ ಕೊಯ್ಲು ಆರಂಭಿಸಿರುವ ಅವರು, 10 ಕ್ವಿಂಟಲ್ ಹಣ್ಣು ಸಿಗುವ ನಿರೀಕ್ಷೆಯಲ್ಲಿದ್ದಾರೆ.

‘ಪ್ರತಿವರ್ಷ ಅರಣ್ಯ ಕಾಲೇಜು ಹಾಗೂ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು, ತಮ್ಮ ಕಲಿಕೆಯ ಭಾಗವಾಗಿ ಮುರುಗಲು ಹಣ್ಣನ್ನು ಖರೀದಿಸಿ, ಅವುಗಳಿಂದ ಕೋಕಂ ಜ್ಯೂಸ್ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು. ಈ ಬಾರಿ ಲಾಕ್‌ಡೌನ್ ಇರುವ ಕಾರಣ ಹಣ್ಣಿಗೆ ಬೇಡಿಕೆ ಬರಲಿಲ್ಲ. ಹೀಗಾಗಿ, ಔಷಧೀಯ ಮೌಲ್ಯವಿರುವ ಹಣ್ಣು ಹಾಗೂ ಬೀಜವನ್ನು ಪ್ರತ್ಯೇಕಿಸಿ, ಬಿಸಿಲಿನಲ್ಲಿ ಒಣಗಿಸಿಡುತ್ತಿದ್ದೇನೆ. ಬುಟ್ಟಿಗಟ್ಟಲೆ ಹಣ್ಣು ಕೊಯ್ಲು ಮಾಡಿ ತಂದರೆ, ಹೆಂಡತಿ, ಇಬ್ಬರು ಮಕ್ಕಳು ಅವುಗಳ ಸಂಸ್ಕರಣೆ ಮಾಡುತ್ತಾರೆ’ ಎನ್ನುತ್ತಾರೆ ರಮೇಶ ಹೆಗಡೆ.

‘ಒಂದು ಕ್ವಿಂಟಲ್ ಹಣ್ಣಿನಿಂದ 12ರಿಂದ 13 ಕೆ.ಜಿ ಒಣಸಿಪ್ಪೆ ಸಿಗುತ್ತದೆ. ಕಳೆದ ವರ್ಷ 1.10 ಕ್ವಿಂಟಲ್ ಸಿಪ್ಪೆಯನ್ನು ಕೆ.ಜಿ.ಯೊಂದಕ್ಕೆ ₹ 65ರ ದರದಲ್ಲಿ ಮಾರಾಟ ಮಾಡಿದ್ದೆ. ಕೂಲಿ ಕೊಟ್ಟು ಕೆಲಸ ಮಾಡಿದರೆ, ಕೆ.ಜಿ.ಯೊಂದಕ್ಕೆ ಕನಿಷ್ಠ ₹ 100 ದರ ಸಿಕ್ಕಿದರೆ ಮಾತ್ರ ಅನುಕೂಲ. ಈ ಬಾರಿ, ನಾವೇ ಎಲ್ಲ ಕೆಲಸವನ್ನು ನಿಭಾಯಿಸಿಕೊಂಡಿದ್ದಕ್ಕೆ ಬಂದಿದ್ದೆಲ್ಲ ಲಾಭವೇ. ಬೀಜಕ್ಕೂ ಒಳ್ಳೆಯ ದರವಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT