ಕಾರವಾರ: ನಗರದ ಬೈತಖೋಲ್ ಬಂದರಿನ ಎರಡನೇ ಹಂತದಅಭಿವೃದ್ಧಿ ಕಾಮಗಾರಿಗೆ ನೀಡಿರುವ ಪರಿಸರ ಅನುಮತಿಯನ್ನು ರದ್ದು ಮಾಡಬೇಕು. ಜೊತೆಗೇ ಹೊಸದಾಗಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲಾ ಮೀನುಗಾರರ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
‘ಕಳೆದ ವರ್ಷ ಫೆ.9ರಂದು ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಮೀನುಗಾರರು ಪ್ರಸ್ತಾವಿತ ಯೋಜನೆಯನ್ನು ವಿರೋಧಿಸಿದ್ದಾರೆ. ಲಿಖಿತವಾಗಿಯೂ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.ಇವುಗಳಿಗೆರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದಿಂದ (ಎಸ್ಎಐಎಎ) ಯಾವುದೇ ಮನ್ನಣೆ ಸಿಗಲಿಲ್ಲ. ಈ ವರ್ಷ ಜ.23ರಂದು ಯೋಜನೆಗೆ ಅನುಮತಿ ನೀಡಿ ಮೀನುಗಾರರಿಗೆ ಅನ್ಯಾಯ ಮಾಡಲಾಗಿದೆ’ ಎಂದು ಮನವಿಯಲ್ಲಿ ದೂರಲಾಗಿದೆ.
‘ಈಗಿರುವ ಸೀಮಿತ ಮೀನುಗಾರಿಕಾ ಪ್ರದೇಶವು, ವಿಸ್ತರಣೆಯಾದ ಬಂದರಿನ ಪಾಲಾಗಲಿದೆ. ಹಲವಾರು ಮೀನುಗಾರರ ಮನೆಗಳನ್ನು ಬಲವಂತವಾಗಿತೆರವು ಮಾಡಿಸಬೇಕಾಗುತ್ತದೆ. ಪ್ರಸ್ತಾವಿತ ತಡೆಗೋಡೆ ನಿರ್ಮಾಣ, ಹೂಳೆತ್ತುವ ಕಾರ್ಯದಿಂದ ಇಡೀ ಕಾರವಾರದ ಕಡಲತೀರ ಮತ್ತು ಒಳಚರಂಡಿ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದುಆತಂಕ ವ್ಯಕ್ತಪಡಿಸಲಾಗಿದೆ.
ಪ್ರಸ್ತಾವಿತ ಯೋಜನೆಯು ಪರಿಸರ ಸೂಕ್ಷ್ಮ ವಲಯದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲೇ ಬರುತ್ತದೆ. ಹಾಗಾಗಿ ಇದಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲೇಅನುಮೋದನೆ ಪಡೆಯಬೇಕಿದೆ. ತನ್ನ ವ್ಯಾಪ್ತಿಯನ್ನು ಮೀರಿ ಎಸ್ಎಐಎಎ ನೀಡಿರುವ ಅನುಮೋದನೆಯನ್ನು ರದ್ದು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿಸೆಂಟರ್ ಫಾರ್ ಪಾಲಿಸಿ ರೀಸರ್ಚ್ನ ಮಹಾಬಲೇಶ್ವರ ಸಾಯಿಮನೆ, ಮೀನುಗಾರರ ಮುಖಂಡರಾದ ಕೆ.ಟಿ.ತಾಂಡೇಲ, ಗಣಪತಿ ಮಾಂಗ್ರೆ, ಶ್ರೀಧರ್ ಹರಿಕಂತ್ರ, ಸುಧಾಕರ್ ಹರಿಕಂತ್ರ, ಪ್ರಶಾಂತ, ಚೇತನ ಹರಿಕಂತ್ರ, ಮೋಹನ್, ವಿನಾಯಕ ಹರಿಕಂತ್ರ ಇದ್ದರು.