ಶಿರಸಿ: ‘ಮುಂಬರುವ ವಿಧಾನಸಭೆ ಚುನಾವಣೆಗೆ ಶಿರಸಿ ಕ್ಷೇತ್ರದಿಂದ ಶಶಿಭೂಷಣ ಹೆಗಡೆ, ಕುಮಟಾ ಕ್ಷೇತ್ರದಿಂದ ಸೂರಜ ನಾಯ್ಕ ಸೋನಿ ಜೆಡಿಎಸ್ ಅಭ್ಯರ್ಥಿಗಳಾಗಿ ಆಯ್ಕೆಯಾಗುವುದುಬಹುತೇಕ ಖಚಿತ. ಅವರಿಗೆ ಈಗಿಂದಲೇ ಪಕ್ಷ ಸಂಘಟನೆಗೆ ವರಿಷ್ಠರು ಸೂಚಿಸಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಗಣಪಯ್ಯ ಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್ ಪಾಲಿನ ಕೆಟ್ಟ ದಿನಗಳು ಕಳೆದಿದ್ದು, ಪಕ್ಷವನ್ನು ಮತ್ತಷ್ಟು ಸದೃಢವಾಗಿ ಸಂಘಟನೆ ಮಾಡಲಾಗುತ್ತಿದೆ. ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹೆಚ್ಚು ಗಮನಹರಿಸಲಾಗುತ್ತಿದೆ. ಇದಕ್ಕಾಗಿ ಪಕ್ಷದ ಯುವ ಘಟಕಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು’ ಎಂದರು.
‘ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ತಾಲ್ಲೂಕು ಸಮಿತಿ ರಚಿಸಲಾಗಿದೆ. ಯಲ್ಲಾಪುರ, ಜೋಯಿಡಾ, ಕಾರವಾರ, ಅಂಕೋಲಾ ಘಟಕಕ್ಕೆ ಶೀಘ್ರದಲ್ಲಿ ಪದಾಧಿಕಾರಿ ನೇಮಿಸಲಾಗುವುದು. ಎರಡು ವಾರದೊಳಗೆ ವಿದ್ಯಾರ್ಥಿ, ರೈತ ಮೋರ್ಚಾ, ಪರಿಶಿಷ್ಟ, ಮಹಿಳಾ ಘಟಕಕ್ಕೆ ಪದಾಧಿಕಾರಿಗಳ ನೇಮಕ ಮಾಡಲಾಗುವುದು’ ಎಂದರು.
ಮುಖಂಡ ಶಶಿಭೂಷಣ ಹೆಗಡೆ, ‘ಪಕ್ಷದ ಚಟುವಟಿಕೆ ಚುರುಕುಗೊಂಡಿದೆ. ಎಚ್.ಡಿ.ಕುಮಾರಸ್ವಾಮಿ ಅವರ ನಿರ್ದೇಶನದಂತೆ ರೈತ ಚೈತನ್ಯ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡುವ ವಿಚಾರಗಳನ್ನು ಜನರಿಗೆ ತಿಳಿಸಲಾಗುವುದು. ಸೈದ್ಧಾಂತಿಕ, ಜನರ ಭಾವನೆಗಳ ಜತೆ ಆಟವಾಡುವ ವಿಚಾರ ಬಿಟ್ಟು ಜನರಿಗೆ ಬೇಕಾದ ಯೋಜನೆ ರೂಪಿಸಲು ಪಕ್ಷ ತೀರ್ಮಾನಿಸಿದೆ’ ಎಂದರು.