ಶಿರಸಿ: ತಾಲ್ಲೂಕಿನ ಬಿಸಲಕೊಪ್ಪ ಸೂರ್ಯನಾರಾಯಣ ಪ್ರೌಢಶಾಲೆಯ ವಿದ್ಯಾರ್ಥಿನಿ ಕನ್ನಿಕಾಪರಮೇಶ್ವರಿ ಹೆಗಡೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕದ ಸಾಧನೆ ಮಾಡಿ ರಾಜ್ಯಕ್ಕೆ ಟಾಪರ್ ಎನಿಸಿದ್ದಾಳೆ.
ಬಿಸಲಕೊಪ್ಪ ಗ್ರಾಮದ ಬಡ ಕುಟುಂಬದ ರಾಮಚಂದ್ರ ಹೆಗಡೆ ಹಾಗೂ ಸುಜಾತಾ ದಂಪತಿಯ ಪುತ್ರಿ.
'ಪಾಲಕರ ಪ್ರೋತ್ಸಾಹವೇ ನನಗೆ ಈ ಸಾಧನೆ ಮಾಡಲು ಪ್ರೇರಣೆ. ಶಾಲೆಯಲ್ಲೇ ಹೇಳಿಕೊಟ್ಟ ಪಾಠ ಸಾಕಾಯಿತು. ಟ್ಯೂಷನ್ ಅಗತ್ಯವೂ ಬೀಳಲಿಲ್ಲ. ಆನ್ಲೈನ್ ಕಲಿಕೆ ಇದ್ದರೂ ಕಲಿಕೆಗೆ ತೊಂದರೆಯಾಗದ ರೀತಿಯಲ್ಲಿ ವೇಳಾಪಟ್ಟಿ ರೂಪಿಸಿಕೊಟ್ಟಿದ್ದರು' ಎಂದು ಕನ್ನಿಕಾ ಪ್ರತಿಕ್ರಿಯಿಸಿದರು.
'ಪಿಯುಸಿಯಲ್ಲಿ ವಿಜ್ಞಾನ ವಿಷಯ ವ್ಯಾಸಂಗ ಮಾಡುವ ಬಯಕೆ ಇದೆ. ಎಂಜಿನಿಯರಿಂಗ್ ಮಾಡಬೇಕು ಎಂಬುದು ಗುರಿ' ಎಂದರು.
'ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬರು ಈ ಸಾಧನೆ ಮಾಡಿದ್ದು ಹೆಮ್ಮೆಯ ಸಂಗತಿ. ಇದು ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ' ಎಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎಂ.ಹೆಗಡೆ ಹೇಳಿದರು.