ಕಾರವಾರ: ಸಾರಿಗೆ ಇಲಾಖೆ ನೌಕರರ ಮುಷ್ಕರದಿಂದಾಗಿ ನಗರದಲ್ಲಿ ಬಸ್ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಗ್ರಾಮೀಣ ಭಾಗಗಳಿಗೆ ಎಂದಿನಂತೆ ಟೆಂಪೊ ಸಂಚಾರವಿದೆ.
ಮುಷ್ಕರವು ಅಧಿಕೃತವಾಗಿ ಬುಧವಾರ ಆರಂಭವಾದರೂ ವಿವಿಧೆಡೆ ಮಂಗಳವಾರ ಮಧ್ಯಾಹ್ನದ ನಂತರದಿಂದಲೇ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಬಂದಿರಲಿಲ್ಲ. ಹಾಗಾಗಿ ಬೆಂಗಳೂರಿನಿಂದ ರಾತ್ರಿ ಹೊರಟು ಕಾರವಾರಕ್ಕೆ ಬೆಳಿಗ್ಗೆ ತಲುಪುವ ಕೆಲವು ಬಸ್ಗಳು ಬಂದಿಲ್ಲ.
ಕಾರವಾರಕ್ಕೆ ಗೋವಾ ಸಾರಿಗೆ ಸಂಸ್ಥೆಯ ಬಸ್ಗಳ ಸಂಚಾರ ಶುರುವಾಗಿದೆ. ಬಸ್ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಪ್ರಯಾಣಿಕರಿಗೆ ತೊಂದರೆಯಾಗದಂತೆ ಸುಮಾರು 140 ಬಸ್ಗಳ ವ್ಯವಸ್ಥೆ ಮಾಡಿದ್ದಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ನಗರದ ಬಸ್ ನಿಲ್ದಾಣದಲ್ಲಿ ಒಂದೂ ಬಸ್ ಇಲ್ಲದೇ ಬಿಕೊ ಎನ್ನುತ್ತಿತ್ತು.
ಮುಷ್ಕರದ ಮಾಹಿತಿಯಿಲ್ಲದ ಒಂದಷ್ಟು ಪ್ರಯಾಣಿಕರು ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ಗಳಿಲ್ಲದ ಕಾರಣ ಸಿಕ್ಕಿದ ವಾಹನಗಳನ್ನೇರಿ ಪ್ರಯಾಣಿಸಿದರು.