ಕಾರವಾರ: ತಾಲ್ಲೂಕಿನ ಅಮದಳ್ಳಿ ಬಳಿ ಶನಿವಾರ ಮುಂಜಾನೆ ರೈಲು ಬಡಿದು ಗಂಡು ಚಿರತೆಯೊಂದು ಸ್ಥಳದಲ್ಲೇ ಮೃತಪಟ್ಟಿದೆ.
ಮಂಗಳೂರಿನಿಂದ ಕಾರವಾರದ ಕಡೆ ಬರುತ್ತಿದ್ದ ರೈಲಿಗೆ ಚಿರತೆಯು ಸಿಲುಕಿ ಅದರ ಕಾಲು ತುಂಡಾಗಿದ್ದು, ಅಧಿಕ ರಕ್ತಸ್ರಾವವಾಗಿತ್ತು. ಚಿರತೆಗೆ ಅಂದಾಜು ಮೂರು ವರ್ಷ ಆಗಿರಬಹುದು. ಪಶುವೈದ್ಯ ದೀಪಕ್ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು.
ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಸಂತ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣ್ ಭೇಟಿ ಪರಿಶೀಲನೆ ನಡೆಸಿದರು. ಕಾರವಾರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.