ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ): ಹಣ್ಣು ಸಾಗಿಸುತ್ತಿದ್ದ ಲಾರಿಯೊಂದು ಪಟ್ಟಣದ ಮುಕ್ತಿಧಾಮದ ಬಳಿ ಶನಿವಾರ ಬೆಳಿಗ್ಗೆ ಪಲ್ಟಿಯಾಗಿದೆ. ಅದರಲ್ಲಿದ್ದ ದಾಳಿಂಬೆ, ದ್ರಾಕ್ಷಿ, ಬೋರೆ ಹಣ್ಣುಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಡಿ, ಸಾರ್ವಜನಿಕರು ಹೆಕ್ಕಿಕೊಳ್ಳಲು ಮುಗಿಬಿದ್ದರು.
ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಸಾಗುತ್ತಿದ್ದ ಲಾರಿ, ಮುಕ್ತಿಧಾಮದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯದಲ್ಲಿ ಮಗುಚಿ ಬಿದ್ದಿತ್ತು. ಅಪಘಾತದಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯವುಂಟಾಗಿತ್ತು.