ಈ ಗ್ರಾಮದಲ್ಲಿ ಹೆಚ್ಚಿನ ರೈತರು ಭತ್ತ ಬೆಳೆಯುತ್ತಾರೆ. ಆದರೆ, ಸಮೀಪದಲ್ಲೇ ಹಳ್ಳದ ನೀರು ಯಥೇಚ್ಛವಾಗಿ ಹರಿಯುತ್ತಿದ್ದರೂ ಗದ್ದೆಗೆ ಸಿಗುತ್ತಿಲ್ಲ. ಸಸಿಗಳಿಗೆ ಹಾಕಿದ ಗೊಬ್ಬರವೂ ಕರಗುತ್ತಿಲ್ಲ. ಬಣಗೆ ಹಳ್ಳಕ್ಕೆ ಐದು ವರ್ಷಗಳ ಹಿಂದೆ ಬಾಂದಾರ ನಿರ್ಮಿಸಲಾಗಿದೆ. ಆದರೆ, ಗದ್ದೆಗಳತ್ತ ಕಾಲುವೆ ನಿರ್ಮಿಸದೇ ಕಲ್ಲಿನಿಂದ ಪಿಚ್ಚಿಂಗ್ ಮಾತ್ರ ನಿರ್ಮಿಸಲಾಗಿದೆ. ಈಚೆಗೆ ಜೋರಾದ ಮಳೆಗೆ ಅದು ಕೂಡ ಕೊಚ್ಚಿಕೊಂಡು ಹೋಗಿದೆ. ಇದರ ಪರಿಣಾಮ ನೀರು ಪುನಃ ಹಳ್ಳದ ಕಡೆಗೇ ಹೋಗುತ್ತಿದೆ ಎಂದು ರೈತರಾದ ಜಯವಂತ ಗೌಡ, ಗೋವಿಂದ ಗೌಡ, ಥಾಕು ಗೌಡ, ಚಂದ್ರಕಾಂತ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.