ಶಿರಸಿ: ತಾಲ್ಲೂಕಿನ ದೇವಿಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನರಸಿಂಹ ಹೆಗಡೆ ಎಂಬುವವರನ್ನು ವರ್ಗಾವಣೆ ಮಾಡುವಂತೆ ವಿದ್ಯಾರ್ಥಿ ಪಾಲಕರು ಶುಕ್ರವಾರ ಬಿಇಒ ಕಚೇರಿ ಎದುರು ಧರಣಿ ನಡೆಸಿದರು.
‘ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡುತ್ತಿಲ್ಲ. ಶಾಲಾಭಿವೃದ್ಧಿ ಸಮಿತಿಯವರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ. ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ಇಲ್ಲದೆ ಸಮಸ್ಯೆ ಉಂಟಾಗುತ್ತಿದೆ. ಅವರು ಒಬ್ಬರೇ ಶಿಕ್ಷಕರು ಇರುವ ಕಾರಣ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಪಾಲಕರು ಆರೋಪಿಸಿದರು.
‘ಎಂಟು ಮಂದಿ ವಿದ್ಯಾರ್ಥಿಗಳಿದ್ದಾರೆ. ಅವರ ಶೈಕ್ಷಣಿಕ ಕಾಳಜಿ ಗಮನದಲ್ಲಿಟ್ಟುಕೊಂಡು ಶಾಲೆಗೆ ಬೇರೊಬ್ಬ ಶಿಕ್ಷಕರನ್ನು ನಿಯೋಜಿಸಬೇಕು. ಈಗಿರುವ ಶಿಕ್ಷಕರನ್ನು ವರ್ಗಾಯಿಸಬೇಕು’ ಎಂದು ಒತ್ತಾಯಿಸಿದರು.
ಸಮಸ್ಯೆ ಆಲಿಸಿದ ಬಿಇಓ ಎಂ.ಎಸ್.ಹೆಗಡೆ, ‘ಪಾಲಕರ ದೂರನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸುತ್ತೇವೆ’ ಎಂದು ಭರವಸೆ ನೀಡಿದರು.
ಬಂಡಲ ಗ್ರಾಮ ಪಂಚಾಯ್ತಿ ಸದಸ್ಯ ದೇವರಾಜ ಮರಾಠಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲ ಮರಾಠಿ, ಕೃಷ್ಣ ಮರಾಠಿ, ಅನಂತ ಮರಾಠಿ, ಗಣಪು ಗೌಡ, ಉದಯ ಭಂಡಾರಿ,ಮುಕ್ತಾ ಗೌಡ, ಮಂಗಲಾ ಮರಾಠಿ, ಯಶೋದಾ ಮರಾಠಿ ಇದ್ದರು.