ಕಾರವಾರ: ‘ಪಿಂಚಣಿದಾರರಿಗೆ ಅನುಕೂಲವಾಗುವಂತೆ ಹೋಬಳಿ ಮಟ್ಟದಲ್ಲಿ ಡಿ.1ರಿಂದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲು ಸೂಚನೆ ನೀಡಲಾಗಿದೆ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗ್ರಾಮೀಣ ಭಾಗದಲ್ಲಿರುವ ಫಲಾನುಭವಿಗಳಿಗೂ ಸೌಲಭ್ಯಗಳು ಸೂಕ್ತ ರೀತಿಯಲ್ಲಿ ಸಿಗಬೇಕು ಎಂಬ ಉದ್ದೇಶವು ರಾಜ್ಯ ಸರ್ಕಾರದ್ದಾಗಿದೆ. ಹಾಗಾಗಿ ಪಿಂಚಣಿ ಅದಾಲತ್ ಆಯೋಜಿಸಲು ತಹಶೀಲ್ದಾರರಿಗೆ ತಿಳಿಸಲಾಗಿದೆ. ಅವರೇ ಅದರ ನೇತೃತ್ವ ವಹಿಸಲಿದ್ದಾರೆ’ ಎಂದರು.
‘ಕಳೆದ ತಿಂಗಳು ಹಮ್ಮಿಕೊಳ್ಳಲಾದ ಕಾರ್ಮಿಕ ಅದಾಲತ್ನಿಂದ ರಾಜ್ಯದಲ್ಲಿ ಹಲವು ವರ್ಷಗಳಿಂದ ಬಾಕಿಯಿದ್ದ 2.61 ಲಕ್ಷ ಅರ್ಜಿಗಳಲ್ಲಿ 2.38 ಲಕ್ಷ ಅರ್ಜಿಗಳ ವಿಲೇವಾರಿ ಆಗಿದೆ. ಕೇವಲ 23 ಸಾವಿರ ಅರ್ಜಿಗಳು ಈಗ ವಿಲೇವಾರಿ ಆಗಬೇಕಾಗಿದ್ದು, ಅವುಗಳಲ್ಲಿ ಹಲವು ನ್ಯಾಯಾಲಯದಲ್ಲಿವೆ’ ಎಂದು ತಿಳಿಸಿದರು.