ಭಟ್ಕಳ: ಪಟ್ಟಣದ ಹೂವಿನಚೌಕದ ಬಳಿ ಬುಧವಾರ ರಾತ್ರಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದಗಟ್ಟಿ, ಚಿನ್ನದ ಬಿಸ್ಕತ್ ಹಾಗೂ ನಗದು ಇಟ್ಟುಕೊಂಡು ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 1,500 ಗ್ರಾಂ ತೂಕದ ಒಂದು ಚಿನ್ನದ ಬಿಸ್ಕತ್, ಎಂಟು ಚಿನ್ನದ ಗಟ್ಟಿ, ₹ 61 ಲಕ್ಷ ನಗದು, ₹ 10 ಲಕ್ಷ ಮೌಲ್ಯದ ಕಾರು ಹಾಗೂ ಎರಡು ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
ಹುಬ್ಬಳ್ಳಿಯ ದುರ್ಗಬೈಲ್ ನಿವಾಸಿಗಳಾದ ಶೈಲೇಶ್ ಮಾದೇವ ಪಾಟೀಲ್ (33) ಹಾಗೂ ವಿಪುಲ್ ಸಂಜಯ ದೇಶಮುಖ್ (25) ಬಂಧಿತ ಆರೋಪಿಗಳು. ಶೈಲೇಶ್ ವೃತ್ತಿಯಲ್ಲಿ ಚಾಲಕ. ವಿಪುಲ್ ಮಹಾರಾಷ್ಟ್ರದ ಸತಾರದವನಾಗಿದ್ದು, ಪ್ರಸ್ತುತ ಹುಬ್ಬಳ್ಳಿ ದುರ್ಗದ ಬೈಲ್ನಲ್ಲಿ ಬಂಗಾರದ ಆಭರಣ ತಯಾರಿಸುವ ಮಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್, ಭಟ್ಕಳ ಎ.ಎಸ್.ಪಿ ನಿಖಿಲ್.ಬಿ. ಮಾರ್ಗದರ್ಶನದಲ್ಲಿ ಸಿ.ಪಿ.ಐ ದಿವಾಕರ್, ಪಿ.ಎಸ್.ಐ.ಗಳಾದ ಭರತಕುಮಾರ್, ಎಚ್.ಬಿ.ಕುಡಗುಂಟಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.