ಗೋಕರ್ಣ: ಇಲ್ಲಿಗೆ ಪೊಲೀಸ್ ಜೀಪ್ನಲ್ಲಿ ಜೆ.ಸಿ.ಬಿ ಚಾಲಕರು ಬಂದ ಪ್ರಕರಣದಲ್ಲಿ ಹುಬ್ಬಳ್ಳಿಯ ಪ್ರಭಾವಿ ರಾಜಕಾರಣಿಯೊಬ್ಬರ ಕೈವಾಡವಿದೆ. ಅವರ ಪ್ರಭಾವದಿಂದಾಗಿ ಜೀಪ್ ಅನ್ನು ಯಾವುದೇ ಚೆಕ್ಪೋಸ್ಟ್ಗಳಲ್ಲಿ ತಡೆಯಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಅವರ ಮೂಲಕವೇ ಆರೋಪಿಗಳಿಗೆ ಪೊಲೀಸರ ವಾಹನ ಸಿಕ್ಕಿದೆ. ಪ್ರಭಾವ ಬಳಸಿ, ಲಾಕ್ಡೌನ್ ಉಲ್ಲಂಘಿಸಿ ಜೆ.ಸಿ.ಬಿ. ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿತ್ತು ಎಂದೂ ಹೇಳಲಾಗುತ್ತಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದಪಿ.ಎಸ್.ಐ ನವೀನ ನಾಯ್ಕ, ‘ಜೆ.ಸಿ.ಬಿ. ಚಾಲಕರು ಶುಕ್ರವಾರ ಹುಬ್ಬಳ್ಳಿಯಿಂದ ಅರಣ್ಯ ಕಾವಲು ಪೊಲೀಸರ ವಾಹನದಲ್ಲಿ ಗೋಕರ್ಣಕ್ಕೆ ಬಂದು ಸಿಕ್ಕಿಬಿದ್ದಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ’ ಎಂದು ತಿಳಿಸಿದ್ದಾರೆ.
‘ಆರೋಪಿಗಳು 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ ನಂತರವೇ ಅವರ ವಿಚಾರಣೆ ನಡೆದು ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೂ ಸೇರಿದಂತೆ ಹಿರಿಯ ಅಧಿಕಾರಿಗಳುಸೇರಿ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುತ್ತಾರೆ. ಪೊಲೀಸ್ ವಾಹನ ಆರೋಪಿಗಳಿಗೆ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಲಿದೆ. ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ತಿಳಿಸಿದ್ದಾರೆ.