ಅಂಕೋಲಾ: ಪಟ್ಟಣದ ಸುಂದರ ನಾರಾಯಣ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ಯು.ಪಿ.ಎಸ್ ಕೊಠಡಿಯಲ್ಲಿ ಮಂಗಳವಾರ ಮಧ್ಯಾಹ್ನ ಏಕಾಏಕಿ ಬೆಂಕಿ ಕಾಣಿಸಿಕೊಂಡು ಆತಂಕ ಉಂಟುಮಾಡಿತು.
ಗಾಬರಿಗೊಂಡ ಬ್ಯಾಂಕ್ ಸಿಬ್ಬಂದಿ ತಕ್ಷಣ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ತಂಡದವರು ಕೇವಲ 10 ನಿಮಿಷಗಳಲ್ಲಿ ಬೆಂಕಿ ಆರಿಸಿ ಸಂಭಾವ್ಯ ದೊಡ್ಡ ಅನಾಹುತವನ್ನು ತಪ್ಪಿಸಿದರು.
ರಸ್ತೆ ಮೇಲಿನ ವಿದ್ಯುತ್ ತಂತಿಯ ಮೇಲೆ ಮರದ ಟೊಂಗೆ ಬಿದ್ದ ಪರಿಣಾಮ ವಿದ್ಯುತ್ ಸಂಚಾರದಲ್ಲಿ ಏರುಪೇರು ಉಂಟಾಗಿತ್ತು. ಈ ಕಾರಣದಿಂದ ಬೆಂಕಿ ತಗಲಿರಬಹುದು ಎನ್ನಲಾಗಿದೆ. ಕೊಠಡಿಯಲ್ಲಿದ್ದ ಯು.ಪಿ.ಎಸ್ ಚಾರ್ಜರ್ ಸುಟ್ಟುಹೋಗಿದ್ದು ಅಂದಾಜು ₹ 40 ಸಾವಿರ ಹಾನಿ ಸಂಭವಿಸಿದೆ. ಕೊಠಡಿಯಲ್ಲಿ ಯು.ಪಿ.ಎಸ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ.
ಅಗ್ನಿಶಾಮಕ ದಳದ ಠಾಣಾಧಿಕಾರಿ ಉಮೇಶ ನಾಯ್ಕ, ಸಿಬ್ಬಂದಿ ಗಜಾನನ ನಾಯ್ಕ, ಗಣೇಶ ಶೇಟ್, ಗಣೇಶ ನಾಯ್ಕ, ಜೀವನ ಬಬ್ರುಕರ, ಅಮಿತ್ ನಾಯ್ಕ ಮತ್ತು ಬ್ಯಾಂಕ್ ಸಿಬ್ಬಂದಿ ಇದ್ದರು.