ಶಿರಸಿ: ನಗರ ಸಂಸ್ಕೃತಿಗೆ ಒಗ್ಗಿಕೊಂಡವರು ಊರಿನ ಅಭಿಮಾನ ಮರೆಯುತ್ತಿರುವದು ವಿಷಾದಕರ.ಪ್ರತಿ ವ್ಯಕ್ತಿಗೂ ತನ್ನ ಊರಿನ ಕುರಿತಾದ ಅಭಿಮಾನ ಜಾಗೃತವಾಗಿರಬೇಕು ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲ್ಲೂಕಿನ ಬೆಳ್ಳೆಕೇರಿ ಗ್ರಾಮದಲ್ಲಿ ಭಾನುವಾರ ಗಜಾನನ ಯುವಕ ಮಂಡಳಿಯ ನಾಲ್ಕನೆ ದಶಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಬೆಳ್ಳೇಕೇರಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ವೈಯಕ್ತಿ ಹಿತಕ್ಕಿಂತ ಸಾಮೂಹಿಕ ಸಂಕಲ್ಪ ಶಕ್ತಿ ಊರಿನ ಯಶಸ್ಸು, ಅಭಿವೃದ್ದಿ, ಸವಾಲು ಎದುರಿಸಲು ಸಾಧ್ಯವಾಗುತ್ತದೆ. ಊರಿನ ಮೂಲತನವನ್ನು ಕಾಪಿಟ್ಟುಕೊಳ್ಳುವ ಸವಾಲನ್ನು ಸಾಂಘಿಕ ಯತ್ನದ ಮೂಲಕ ಸಾಧ್ಯವಾಗಿಸಬಹುದು ಎಂಬುದಕ್ಕೆ ಈ ಹಬ್ಬ ಮಾದರಿ’ ಎಂದರು.
ಯುವಕ ಸಂಘದ ಅಧ್ಯಕ್ಷ ಎಂ.ಡಿ.ಹೆಗಡೆ ಬೆಳ್ಳೇಕೆರಿ ಅಧ್ಯಕ್ಷತೆ ವಹಿಸಿದ್ದರು. ರಘುಪತಿ ಹೆಗಡೆ, ವಿಜ್ಞಾನಿ ಪ್ರಭಾಕರ ಭಟ್ಟ ತಟ್ಟೀಕೈ, ಎಂ.ಎನ್.ಹೆಗಡೆ ಮುಂಡಗೇಸರ, ಆರ್.ವಿ.ಭಾಗವತ ಶಿರಸಿಮಕ್ಕಿ ಇತರರು ಇದ್ದರು.
ಗ್ರಾಮದ ಮನೆಗಳಲ್ಲಿರುವ ಹಳೆಯ ಕಾಲದ ವಸ್ತುಗಳ ಪ್ರದರ್ಶನ ಗಮನಸೆಳೆಯಿತು. ಯುವಕ ಮಂಡಳಿಯ ನಾಲ್ಕು ದಶಕಗಳ ಸಂಘ ಶಕ್ತಿ ಹೊತ್ತಿಗೆ ಹಾಗೂ ಬೆಳ್ಳೇಕೇರಿ ಡಾಟ್ ಕಾಮ್ ವೆಬ್ ಸೈಟ್ ಕೂಡ ಬಿಡುಗಡೆಗೊಳಿಸಲಾಯಿತು.