ಶಿರಸಿ: ಕಟ್ಟಡ ನಿರ್ಮಾಣದ ಬಿಲ್ ಮೊತ್ತ ಬಿಡುಗಡೆಗೊಳಿಸಲು ಗುತ್ತಿಗೆದಾರರೊಬ್ಬರಿಂದ ₹12 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಲ್ಲಿನ ಪಂಚಾಯರಾಜ್ ಎಂಜಿನಿಯರಿಂಗ್ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಕಚೇರಿಯ ಇಬ್ಬರನ್ನು ಎಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಎಫ್.ಡಿ.ಎ. ಯದುನಂದನ (34), ಹೊರಗುತ್ತಿಗೆ ಸಿಬ್ಬಂದಿ ಸುಬ್ರಹ್ಮಣ್ಯ ನಾಯ್ಕ (35) ಬಂಧಿತರು. ಭದ್ರಾವತಿ ಮೂಲದ ಗುತ್ತಿಗೆದಾರ ಸುನೀಲ್ ಎಂಬುವವರು ಸಿದ್ದಾಪುರ ತಾಲ್ಲೂಕಿನ ಇಟಗಿ ಗ್ರಾಮ ಪಂಚಾಯ್ತಿಗೆ ಸಂಬಂಧಿಸಿದ ₹5.30 ಲಕ್ಷ ವೆಚ್ಚದ ಕಟ್ಟಡ ನಿರ್ಮಿಸಿದ್ದರು.
ಕಾಮಗಾರಿ ಬಿಲ್ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ದೂರು ನೀಡಿದ್ದರು ಎಂದು ಎಸಿಬಿ ಡಿವೈಎಸ್ಪಿ ವೀರೇಶ್ ತಿಳಿಸಿದ್ದಾರೆ.