ಕುಮಟಾ: ತಾಲ್ಲೂಕಿನ ಕತಗಾಲ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬುಧವಾರ, ವಾಹನದಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಕಡವೆಯ ನಾಲ್ಕು ಕೊಂಬುಗಳು ಹಾಗೂ ಕಟ್ಟಿಗೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
‘ಕಡವೆ ಕೊಂಬುಗಳ ಜೊತೆಗೆ ಕಾಡು ಜಾತಿಯ ವಿವಿಧ ಮರಗಳ 54 ಕಟ್ಟಿಗೆ ತುಂಡುಗಳು, ಸರಕು ಸಾಗಣೆಯ ಆಟೊ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ವನ್ಯಜೀವಿ ಹಾಗೂ ಅರಣ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ ಹಾಗೂ ಕುಮಟಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಶೇಟ್ ನೇತೃತ್ವದಲ್ಲಿ ಕತಗಾಲ ವಲಯ ಅರಣ್ಯ ಸಿಬ್ಬಂದಿ ದಾಳಿ ಮಾಡಿದರು’ ಎಂದು ಕತಗಾಲ ವಲಯ ಅರಣ್ಯಾಧಿಕಾರಿ ದೀಪಕ್ ನಾಯ್ಕ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಬಿ.ಎನ್.ಬಂಕಾಪುರ, ಹರಿಶ್ಚಂದ್ರ ಪಟಗಾರ, ಅರಣ್ಯ ರಕ್ಷಕರಾದ ಮಹೇಶ ಹವಳೆಮ್ಮನವರ್, ಗಣೇಶ ನಾಯಕ, ಸದಾಶಿವ ಪುರಾಣಿಕ್, ವಾಹನ ಚಾಲಕ ವಸಂತ ನಾಯ್ಕ, ಸಿಬ್ಬಂದಿ ನಾಗೇಶ ಪಟಗಾರ, ಶಂಕರ ಗೌಡ, ಕಿರಣ ನಾಯ್ಕ ಪಾಲ್ಗೊಂಡಿದ್ದರು.