ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣದ ‘ಅಶೋಕೆ’ಯಲ್ಲಿ ಕರ್ನಾಟಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವೈಭವ

Last Updated 19 ಅಕ್ಟೋಬರ್ 2021, 10:26 IST
ಅಕ್ಷರ ಗಾತ್ರ

ಕಾರವಾರ: ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಿಂದ (ವಿ.ವಿ.ವಿ) ಸಮೀಪದ ಅಶೋಕೆಯಲ್ಲಿ ಅ.20 ಹಾಗೂ 21ರಂದು ಸಂಗೀತೋತ್ಸವ ಆಯೋಜಿಸಲಾಗಿದೆ.

ವಿ.ವಿ.ವಿ.ಯಲ್ಲಿ ಇದೇ ಮೊದಲ ಬಾರಿ ವಿದ್ಯಾರ್ಥಿಗಳಿಗೆ ತಾವು ಇಚ್ಛಿಸಿದ ಪಾರಂಪರಿಕ ಸಂಗೀತ ವಿದ್ಯೆ, ಕಲೆಯನ್ನು ಪ್ರಾತ್ಯಕ್ಷಿಕೆ ಮೂಲಕ ಕಲಿಯಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಸಂಗೀತೋತ್ಸವ ಆಯೋಜಿಸಲಾಗಿದೆ. ಎರಡು ದಿನಗಳ ಕಾರ್ಯಕ್ರಮದ ಸಾನ್ನಿಧ್ಯವನ್ನು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಹಿಸಲಿದ್ದಾರೆ. ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ ಎಂದು ವಿ.ವಿ.ವಿ ಸಂಗೀತ ವಿಭಾಗದ ಮುಖ್ಯಸ್ಥ ರಘುನಂದನ ಬೇರ್ಕಡವು ಹೇಳಿದ್ದಾರೆ.

ಎರಡೂ ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ವಿದ್ಯಾ ವಿಶ್ವ ಸಭಾಂಗಣದಲ್ಲಿ ಸಂಗೀತೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ವಾದ್ಯ ಸಂಗೀತಗಳ ಪ್ರಾತ್ಯಕ್ಷಿಕೆ, ನಾಡಿನ ಪ್ರಸಿದ್ಧ ಕಲಾವಿದರಿಂದ ಗಾಯನ ಮತ್ತು ವಾದನಗಳ ಪ್ರಸ್ತುತಿ, ವಿದ್ಯಾರ್ಥಿಗಳ ಜತೆ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅ.20ರಂದು ಕರ್ನಾಟಕ ಸಂಗೀತದ ವೈವಿಧ್ಯವನ್ನು ಪ್ರಸ್ತುತ ಪಡಿಸಲಾಗುತ್ತಿದೆ. ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ನಿರ್ದೇಶನದಲ್ಲಿ ಇಡೀ ದಿನ ವೈವಿಧ್ಯಮಯ ಕಾರ್ಯಕ್ರಮಗಳಿವೆ. ವಿದುಷಿ ಕಾಂಚನ ಶ್ರೀರಂಜಿನಿ ಮತ್ತು ಶ್ರುತಿರಂಜಿನಿ (ಕಾಂಚನ ಸಹೋದರಿಯರು) ಅವರಿಂದ ಗಾಯನ, ವಿದ್ವಾನ್ ಕೆ.ಯು. ಜಯಚಂದ್ರ ರಾವ್ ಅವರಿಂದ ಮೃದಂಗ ವಾದನ, ವಿದ್ವಾನ್ ಗಿರಿಧರ ಉಡುಪ ಅವರ ಘಟಂ ವಾದನವಿದೆ.

ವಿದ್ವಾನ್ ನಿತೀಶ್ ಅಮ್ಮಣ್ಣಾಯ ಅವರ ಕೊಳಲು ವಾದನ, ವಿದ್ವಾನ್ ಕಾರ್ತಿಕ್ ಕೃಷ್ಣ ಅವರಿಂದ ತಬಲಾ, ವಿದ್ವಾನ್ ಕಾರ್ತಿಕ್ ವೈದಾತ್ರಿಯವರ ಖಂಜೀರ, ಮೋಚಿಂಗ್, ರಿದಂ ಪ್ಯಾಡ್, ಕೆ.ಜಿ.ಋತ ಅವರ ಪಿಟೀಲು ವಾದನ, ರಬಿನಂದನ್ ಅವರ ಕೊನ್ನಕ್ಕೋಲು ವಾದನವು ಮೊದಲ ದಿನದ ವಿಶೇಷ ಆಕರ್ಷಣೆಯಾಗಿರುತ್ತದೆ.

ಸಂಗೀತೋತ್ಸವದ ಎರಡನೇ ದಿನವಾದ 21ರಂದು ಹಿಂದೂಸ್ತಾನಿ ಸಂಗೀತದ ವೈವಿಧ್ಯಮಯ ಪ್ರಕಾರಗಳು ಪ್ರಸ್ತುತಗೊಳ್ಳಲಿವೆ. ಪಂಡಿತ ಪರಮೇಶ್ವರ ಹೆಗಡೆ, ಡಾ.ಅಶೋಕ ಹುಗ್ಗಣ್ಣವರ್, ವಿದ್ವಾನ್ ವಿಶ್ವೇಶ್ವರ ಭಟ್ ಖರ್ವ, ವಿದ್ವಾನ್ ಶ್ರೀಧರ ಹೆಗಡೆ ಅವರ ಗಾಯನವಿದೆ.

ಪ್ರೊ.ರಾಮಚಂದ್ರ ವಿ.ಹೆಗಡೆ ಹಳ್ಳದಕೈ ಅವರಿಂದ ರುದ್ರವೀಣಾ, ಗೋಪಾಲಕೃಷ್ಣ ಹೆಗಡೆ ಮತ್ತು ಡಾ.ಉದಯ ಕುಲಕರ್ಣಿಯವರಿಂದ ತಬಲಾ ವಾದನ, ರಾಮಕೃಷ್ಣ ಹೆಗಡೆಯವರ ಸಿತಾರ್, ಸುಧೀರ್ ಹೆಗಡೆ ಅವರ ಬಾನ್ಸುರಿ, ಪ್ರಜ್ಞಾನ ಲೀಲಾಶುಕ ಉಪಾಧ್ಯಾಯ (ಸೂರಿ) ಅವರಿಂದ ಹಾರ್ಮೋನಿಯಂ ವಾದನ ಸಂಗೀತ ರಸಿಕರಿಗೆ ರಸದೌರಣ ಒದಗಿಸಲಿವೆ.
ಎರಡೂ ದಿನಗಳ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT