ಕಾರವಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ ಹೊನ್ನಾವರ ತಾಲ್ಲೂಕಿನ ಮಂಕಿ ಗ್ರಾಮದ ದೀಪಕ್ ಆರ್.ಶೇಟ್ 311ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಆರನೇ ತರಗತಿಯಿಂದ 10ನೇ ತರಗತಿಯವರೆಗೆ ಶಿರಸಿಯ ಮೊರಾರ್ಜಿ ಶಾಲೆಯಲ್ಲಿ ಅಧ್ಯಯನ ಮಾಡಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅವರು ಶಾಲೆಗೆ ‘ಟಾಪರ್’ ಆಗಿದ್ದರು. ಆ ದಿನಗಳಲ್ಲಿ ಶಾಲಾ ಮಂತ್ರಿ ಮಂಡಲದಲ್ಲಿ ಆಹಾರ ಖಾತೆಯ ಸಚಿವರಾಗಿದ್ದರು. ಅವರಿಗೆ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ನೆಚ್ಚಿನ ಕ್ರಿಕೆಟರ್ ಆಗಿದ್ದರು ಎಂದು ಸಹಪಾಠಿಗಳು ನೆನಪಿಸಿಕೊಂಡಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪಿ.ಯು. ಅಧ್ಯಯನ ಮಾಡಿ, ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದರು. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಅವರು, ಯು.ಪಿ.ಎಸ್.ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು ಬೆಂಗಳೂರಿನಲ್ಲೇ ತರಬೇತಿಗೆ ಸೇರಿಕೊಂಡರು.
ಅವರ ಕುಟುಂಬವು ಮಂಕಿ ಗ್ರಾಮದಲ್ಲಿದ್ದು, ಚಿನ್ನ ಬೆಳ್ಳಿಯ ವ್ಯಾಪಾರ ನಡೆಸುತ್ತಿದ್ದಾರೆ.