ಶಿರಸಿ: ‘ಗಿಡ ನೆಟ್ಟ ಮಾತ್ರಕ್ಕೆ ವನಮಹೋತ್ಸವ ಆಚರಣೆ ಆಗದು. ನೆಟ್ಟ ಗಿಡ ಬೆಳೆಸುವ ಮೂಲಕ ಆಚರಣೆಗೆ ಅರ್ಥ ನೀಡಬೇಕು’ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.
ತಾಲ್ಲೂಕಿನ ಕೆಂಗ್ರೆಮಠದ ಶ್ರೀ ಆಯುರ್ವೇದಿಕ್ ಫಾರ್ಮಾಸುಟಿಕಲ್ಸ್ ಆವರಣದಲ್ಲಿ ಹುಲೇಕಲ್ ಅರಣ್ಯ ವಲಯದ ಸಹಯೋಗದಲ್ಲಿ ಸೋಮವಾರ ನಡೆದ ಹಿಂದಿನ ವರ್ಷ ನೆಟ್ಟ ಗಿಡಗಳ ಅವಲೋಕನ ಮತ್ತು ವನ ಮಹೋತ್ಸವ ಮುಂದುವರಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜನಪದ ಹಾಗೂ ಪಾರಂಪರಿಕ ವೈದ್ಯ ಸಂಘದ ಜಿಲ್ಲಾ ಘಟಕದ ಪ್ರಧಾನ ಸಂಯೋಜಕ ವಿಶ್ವನಾಥ ಹೆಗಡೆ ಕಡಬಾಳ, ‘ಕಳೆದ ವರ್ಷ ನೆಟ್ಟಿದ್ದ ಗಿಡಗಳಲ್ಲಿ ಶೇ 85ರಷ್ಟು ಗಿಡಗಳು ಬದುಕಿದ್ದು ಅವು ಉತ್ತಮ ಬೆಳವಣಿಗೆ ಕಾಣುತ್ತಿವೆ’ ಎಂದರು.
ಪಾರಂಪರಿಕ ವೈದ್ಯ ಶ್ರೀಧರ ಹೆಗಡೆ ನಕ್ಷೆ ಅವರನ್ನು ಸನ್ಮಾನಿಸಲಾಯಿತು.
ಆರ್.ಎಫ್.ಒ ಮಂಜುನಾಥ ಹೆಬ್ಬಾರ್, ಪ್ರಮುಖರಾದ ರವಿ ಹಳದೋಟ, ನರಸಿಂಹ ಹೆಗಡೆ ಬಕ್ಕಳ, ಗ್ರಾಮ ಪಂಚಾಯ್ತಿ ಸದಸ್ಯರಾದ ಜಿ.ವಿ.ಹೆಗಡೆ, ಡಾ.ಹೇಮರೆಡ್ಡಿ ಬಿ.ನೀಲಗುಂದ ಇದ್ದರು.