ಕಾರವಾರ: ಅಂಕೋಲಾ ತಾಲ್ಲೂಕಿನ ಗುಳ್ಳಾಪುರದಲ್ಲಿ ಬುಧವಾರ ಗಂಗಾವಳಿ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯ ಶವವು, ಸಮೀಪದ ಸೇತುವೆಯ ಬಳಿ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.
ಮೃತರನ್ನು ಹೊನ್ನಾವರ ಸಂತೋಷ ನಾಯ್ಕ (30) ಎಂದು ಗುರುತಿಸಲಾಗಿದೆ. ಭಾರಿ ಮಳೆಗೆ ಗಂಗಾವಳಿ ನದಿಯ ನೀರು ರಸ್ತೆಯಲ್ಲಿ ಹರಿದಿತ್ತು. ಅದರಲ್ಲಿ ಬೈಕ್ ಚಲಾಯಿಸಿಕೊಂಡು ಬಂದಿದ್ದರು.
ಅವರ ಜೊತೆಗಿದ್ದ ಮತ್ತೊಬ್ಬರನ್ನು ನಿನ್ನೆಯೇ ರಕ್ಷಿಸಲಾಗಿತ್ತು. ನೀರಿನ ಸೆಳೆತಕ್ಕೆ ಸಿಲುಕಿದ ಸಂತೋಷ, ಕೊಚ್ಚಿಕೊಂಡು ಹೋಗಿದ್ದರು. ಅಗ್ನಿಶಾಮಕ ದಳ, ಪೊಲೀಸರು ಹಾಗೂ ಗ್ರಾಮಸ್ಥರು ಬುಧವಾರ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.