ಕಾರವಾರ: ‘ಶಿಕ್ಷಕರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಒಗ್ಗಟ್ಟಿನ ಮಾರ್ಗದಲ್ಲಿ ಸಾಗಬೇಕು. ಸೌಲಭ್ಯ ದೊರೆಯಿತೆಂದು ಸಂಘಟನೆ ಮರೆತರೆ ನ್ಯಾಯ ಸಿಗುವುದು ಕಷ್ಟ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.
ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕ ಹಾಗೂ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ಮಕ್ಕಳಲ್ಲಿ ಪರೀಕ್ಷೆ ಭೀತಿ ನಿವಾರಣೆಯಲ್ಲಿ ಶಿಕ್ಷಕರ ಪಾತ್ರ ಕಾರ್ಯಾಗಾರ, ಸಾಧಕರಿಗೆ ಪುರಸ್ಕಾರ, ನಿವೃತ್ತರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಹಿಂದೆ ಮೂರು ತಿಂಗಳಿಗೊಮ್ಮೆ ಶಿಕ್ಷಕರು ವೇತನ ಪಡೆಯುವ ಸ್ಥಿತಿ ಇತ್ತು. ಅವರ ಬೇಡಿಕೆ ಈಡೇರಿಸಲು ಸಂಘಟನೆ ರಚಿಸಿ ಬಲಪಡಿಸುವ ಕೆಲಸ ಮಾಡಲಾಯಿತು. ಈಗ ಕಾಲಕಾಲಕ್ಕೆ ವೇತನ ಸೇರಿದಂತೆ ಹಲವು ಸೌಲಭ್ಯ ಸಿಗುತ್ತಿದೆ. ಆದರೆ ಸಂಘಟನೆಯಿಂದ ದೂರ ಸರಿಯುತ್ತಿರುವುದು ಸರಿಯಲ್ಲ’ ಎಂದರು.
‘ಶಿಕ್ಷಕರು ಮಕ್ಕಳಿಗೆ ಮಾದರಿ ಆಗುವಂತಿರಬೇಕು. ಶಿಕ್ಷಣ ವ್ಯವಸ್ಥೆಯ ಹೊಸ ಪದ್ಧತಿಗಳು ಮಕ್ಕಳಿಗೆ ಸುಲಭವಾಗಬಹುದು. ಆದರೆ ಪರಿಣಾಮಕಾರಿ ಪರೀಕ್ಷೆ ನಡೆಸುವುದು ಕಷ್ಟವಾಗಬಹುದು’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ‘ಮಕ್ಕಳಲ್ಲಿ ಮೌಲ್ಯಯುತ ಜ್ಞಾನ ಬೆಳೆಯವಂತೆ ಮಾಡುವುದು ಶಿಕ್ಷಕರ ಜವಾಬ್ದಾರಿ. ಕೇವಲ ಪರೀಕ್ಷೆ ಉದ್ದೇಶಕ್ಕೆ ಕಲಿಕೆ ಆಗಬಾರದು’ ಎಂದರು.
ಉಪನ್ಯಾಸ ನೀಡಿದ ಜಿ.ಕೆ.ವೆಂಕಟೇಶಮೂರ್ತಿ, ‘ಮಕ್ಕಳ ಜ್ಞಾನ ಮಟ್ಟವನ್ನು ಅಂಕ ಗಳಿಕೆಯಿಂದ ಅಳೆಯುವುದು ಸರಿಯಲ್ಲ’ ಎಂದರು.
ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಡಿಡಿಪಿಐ ಈಶ್ವರ ನಾಯ್ಕ, ಬಿಇಒಗಳಾದ ಶಾಂತೇಶ ನಾಯಕ, ಮಂಗಳಲಕ್ಷ್ಮೀ ಪಾಟೀಲ್, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಎಂ.ಹೆಗಡೆ, ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಆರ್.ಭಟ್, ಪದಾಧಿಕಾರಿಗಳು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.