ಭಟ್ಕಳ: ಭಟ್ಕಳ ತಾಲ್ಲೂಕು ನಾಮಧಾರಿ ಸಮಾಜದ ಶಿಕ್ಷಣ ಪ್ರೇಮಿಗಳು ಆಯೋಜಿಸಿದ್ದ ಸತತ 3ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಇಡೀ ಸಮಾಜಕ್ಕೆ ಮಾದರಿಯಾದುದು ಎಂದು ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷರಾದ ಡಿ.ಬಿ.ನಾಯ್ಕ ನುಡಿದರು.
ಪಟ್ಟಣದ ಆಸರಕೇರಿಯ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ಸಭಾ ಭವನದಲ್ಲಿ ಭಟ್ಕಳ ತಾಲ್ಲೂಕು ನಾಮಧಾರಿ ಸಮಾಜದ ಶಿಕ್ಷಣ ಪ್ರೇಮಿಗಳು ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕವಾಗಿ ಸಬಲರಲ್ಲದ, ದುಡಿಯುವ ಕೈಗಳಿಲ್ಲದ ಕುಟುಂಬದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿರುವುದು ಎಲ್ಲರಿಗೂ ಮಾದರಿ. ಓದಲು ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ್ಕೆ ಕೊರತೆಯಿಲ್ಲ. ವಿದ್ಯಾರ್ಥಿಗಳು ಗುರಿ ಮುಟ್ಟುವ ತನಕ ಶ್ರದ್ಧೆ ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು. ಮುಂದೆ ತಾವು ನೆಲೆ ನಿಂತ ನಂತರ ಇಂಥ ಸಂಘಟನೆಗಳ ಮೂಲಕ ದುರ್ಬಲರ ನೆರವಿಗೂ ಕೈಜೋಡಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ನಾಮಧಾರಿ ಸಮಾಜದ ಶಿಕ್ಷಣ ಪ್ರೇಮಿಗಳ ಸಂಘಟನೆಯ ಸಂಚಾಲಕ ರಾಘವೇಂದ್ರ ನಾಯ್ಕ ಮಾತನಾಡಿ ಶೈಕ್ಷಣಿಕ ನಿಧಿ ಹುಂಡಿ ಯೋಜನೆಯ ಮೂಲಕ ಸಮುದಾಯದ ವಿದ್ಯಾರ್ಥಿಗಳ ನೆರವಾಗುವ ಕಾರ್ಯಕ್ರಮಕ್ಕೆ ಸಮಾಜ ಬಾಂಧವರಿಂದ ತೆರೆದ ಮನಸಿನ ಸಹಕಾರ ದೊರೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಸಾಧನೆಯ ಹಂಬ ಹೊಂದಿದ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಶಿಕ್ಷಣ ಪ್ರೇಮಿಗಳು ಸದಾ ಜೊತೆಯಿರಲಿದ್ದಾರೆ ಎಂದರು.
ಗುರುಮಠದ ಅಧ್ಯಕ್ಷ ಅರುಣ ನಾಯ್ಕ ಮಾವಳ್ಳಿ ಹೋಬಳಿ ನಾಮಧಾರಿ ಸಮಾಜದ ಅಧ್ಯಕ್ಷ ಆರ್.ಕೆ.ನಾಯ್ಕ, ನಿವೃತ್ತ ನ್ಯಾಯಾಧೀಶರಾದ ರವಿ ನಾಯ್ಕ, ತಾಲ್ಲೂಕು ನಾಮಧಾರಿ ಸಮಾಜದ ಸದಸ್ಯರಾದ ಭವಾನಿಶಂಕರ ನಾಯ್ಕ ಮಾತನಾಡಿದರು. ಶಿವಾನಂದ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ 90ಕ್ಕಿಂತ ಅಧಿಕ ಅಂಕ ಗಳಿಸಿದ 114 ವಿದ್ಯಾರ್ಥಿಗಳಿಗೆ ಪುರಸ್ಕಾರದ ಜೊತೆ ಪ್ರೋತ್ಸಾಹ ಧನ ಮತ್ತು ಪಾಲಕರಿಲ್ಲದ ಆರ್ಥಿಕವಾಗಿ ಸಬಲರಿಲ್ಲದ 18 ವಿದ್ಯಾರ್ಥಿಗಳಿಗೆ ತಲಾ ₹10,000 ಸಹಾಯಧನ ವಿತರಿಸಲಾಯಿತು.
ಸಹಕಾರಿ ಧುರೀಣರಾದ ಈರಪ್ಪ ಗರ್ಡೀಕರ, ಆಸರಕೇರಿ ಗುರುಮಠ ಆಡಳಿತ ಮಂಡಳಿ ಸದಸ್ಯರು ಹಾಗೂ ಸಾರದಹೊಳೆ ಹಳೆಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಪುರಸ್ಕೃತ ವಿದ್ಯಾರ್ಥಿಗಳು ಹಾಗೂ ಪಾಲಕರು, ನಾಮಧಾರಿ ಸಮಾಜದ ಪ್ರಮುಖರಾದ ಎಂ.ಕೆ.ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಡಿ.ಎಲ್.ನಾಯ್ಕ, ಕಮಲಾ ಕೆ.ನಾಯ್ಕ, ಪೂರ್ಣಿಮಾನಾಯ್ಕ, ರಶ್ಮಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಸಂಘಟನೆಯ ಸದಸ್ಯ ದೀಪಕ ನಾಯ್ಕ ಮುರ್ಡೇಶ್ವರ ವಂದಿಸಿದರು. ಮಂಜುನಾಥ ನಾಯ್ಕ ವಂದಿಸಿದರು. ಶಿಕ್ಷಕರಾದ ನಾರಾಯಣ ನಾಯ್ಕ ಹಾಗೂ ಪರಮೇಶ್ವರ ನಾಯ್ಕ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.