ದಾಂಡೇಲಿ: ಇಲ್ಲಿನ ಮೋಹಿನಿ ಸರ್ಕಲ್ ಹತ್ತಿರ ಶುಕ್ರವಾರ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿ, ಕಾರಿನಲ್ಲಿದ್ದ ಎಂಟು ಜನ ಗಾಯಗೊಂಡಿದ್ದಾರೆ.
ಶಿರಸಿಯಿಂದ ಮದುವೆ ಕಾರ್ಯಕ್ರಮಕ್ಕೆಂದು ದಾಂಡೇಲಿಗೆ ಬರುತ್ತಿದ್ದ ಕಾರು, ಅಂಬಿಕಾನಗರ ಮಾರ್ಗವಾಗಿ ದಾಂಡೇಲಿಯ ಮೋಹಿನಿ ಸರ್ಕಲ್ ಹತ್ತಿರ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಕಮರಿಗೆ ಬಿದ್ದಿದೆ. ಮೂರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು, ಚಾಲಕ ಸೇರಿದಂತೆ ಎಂಟು ಜನರಿಗೆ ಗಾಯಗೊಂಡಿದ್ದಾರೆ.
ಸ್ಥಳದಲ್ಲಿದ್ದ ಸಾರ್ವಜನಿಕರು ಕಾರಿನ ಮುಂಭಾಗದಲ್ಲಿದ್ದ ಚಾಲಕ, ಮಹಿಳೆಯರು ಹಾಗೂ ಮಕ್ಕಳನ್ನು ಕಾಪಾಡಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಚಾಲಕ ಪ್ರಶಾಂತ ಕುಂಬಾರ ಹಾಗೂ ಶಿರಸಿಯ ಸಂಕಲ್ಪ, ಮಗುವೊಂದನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಕಳುಹಿಸಲಾಗಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.