ಶಿರಸಿ: ಅಧಿಕಾರ, ಹಣಕ್ಕಾಗಿ ಓಡಿಹೋದವರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ವಾಪಸ್ ಓಡಿ ಬರುವುದು ಯಾವ ರೀತಿಯ ಭಂಡ ರಾಜಕೀಯ ಎಂದು ಶಾಸಕ ಭೀಮಣ್ಣ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಕೆರೆಗುಂಡಿ ರಸ್ತೆಯ ಮಾರುತಿ ದೇವಾಲಯಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಹಣ, ಅಧಿಕಾರಕ್ಕಾಗಿ ಪಕ್ಷಾಂತರಿಗಳಾದವರು ಅಲ್ಲಿಂದ ಮತ್ತೆ ಅಧಿಕಾರ, ಹಣದ ಉದ್ದೇಶಕ್ಕಾಗಿ ಕಾಂಗ್ರೆಸ್ ಗೆ ಬರುವುದರಲ್ಲಿ ಯಾವುದೇ ಅರ್ಥವಿಲ್ಲ. ನಾನು ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ್ ವಿರುದ್ಧ ಚುನಾವಣೆಗೆ ನಿಂತಿದ್ದೆ. ಆಗ ಅವರು ಯಾರ ಬೆಂಬಲ ಪಡೆದರು, ಯಾರ ಸಹಕಾರದಿಂದ ಗೆದ್ದು ಬಂದರು ಎಂಬುದನ್ನು ವಿಶ್ಲೇಷಿಸಬೇಕಿದೆ. ಅವರು ಬಿಜೆಪಿಯಿಂದ ಹೊರನಡೆಯುವಾಗ ಅಲ್ಲಿನ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ ವಲಸೆಗೆ ನೈಜ ಕಾರಣ ಹೇಳಿ ಬರಬೇಕಾಗುತ್ತದೆ. ಅವರು ಕಾಂಗ್ರೆಸ್ ಗೆ ವಾಪಸ್ ಬರುವುದಕ್ಕೆ ನನ್ನ ವಿರೋಧವಿದೆ’ ಎಂದರು.
‘ಬನವಾಸಿ ಏತ ನೀರಾವರಿ ಯಾವ ಹಂತದಲ್ಲಿದೆ? ಯಾಕೆ ಪೂರ್ಣವಾಗಿಲ್ಲ? ಸಚಿವರಾಗಿಯೂ ಏಕೆ ಮುಗಿಸಲಾಗಿಲ್ಲ? ಕ್ಷೇತ್ರದ ಅಭಿವೃದ್ಧಿ ಏಕೆ ಹಿನ್ನಡೆಯಾಗಿದೆ? ಎಂಬೆಲ್ಲ ವಿಷಯಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಕೂಲಂಕಷವಾಗಿ ವಿಚಾರಿಸಿಯೇ ಮುಂದಿನ ಹೆಜ್ಜೆಯಿಡುತ್ತದೆ ಎನ್ನುವ ವಿಶ್ವಾಸವಿದೆ’ ಎಂದು ಹೇಳಿದರು.