ಕಾರವಾರ: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು, ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಜತೆಗೆ ಬೆಲೆ ಏರಿಕೆ ನಿಯಂತ್ರಿಸಬೇಕು ಎಂಬ ಆಗ್ರಹ ಮುಂದಿಟ್ಟು ಇಲ್ಲಿನ ಗಾಂಧಿ ಉದ್ಯಾನದಿಂದ ಮಂಗಳವಾರ ಜನಶಕ್ತಿ ವೇದಿಕೆ ನೇತೃತ್ವದಲ್ಲಿ ಎರಡು ದಿನಗಳ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಗಾಂಧಿ ಪುತ್ಥಳಿಗೆ ಹಾರ ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಸಿರು ಬಾವುಟ ತೋರಿಸುವ ಮೂಲಕ ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು.
‘ಭ್ರಷ್ಟಾಚಾರ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ದೊಡ್ಡ ಕಾಯಿಲೆ. ಅದರ ವಿರುದ್ಧ ಸಾಂಘಿಕ ಹೋರಾಟ ನಡೆಸುವ ಅಗತ್ಯವಿದೆ. ಪಾದಯಾತ್ರೆ ಮೂಲಕ ಸಾಮಾಜಿಕ ಪಿಡುಗಿನ ಕುರಿತು ಗಮನಸೆಳೆಯಲು ಹೊರಟಿರುವುದು ಉತ್ತಮ ಕೆಲಸ’ ಎಂದು ಅವರು ಹೇಳಿದರು.
ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ‘ಭ್ರಷ್ಟಾಚಾರ ಸಂಪೂರ್ಣ ತೊಡೆದು ಹಾಕಬೇಕು ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದ್ದೇವೆ. ಕನಿಷ್ಠ ಪಕ್ಷ ಕಡಿವಾಣ ಹಾಕುವ ಮಟ್ಟಿಗಾದರೂ ಜನರನ್ನು ಜಾಗೃತಿಗೊಳಿಸಿದ್ದೇವೆ’ ಎಂದರು.
ಹೆದ್ದಾರಿಯ ಮೂಲಕ ಸಾಗಿದ ಪಾದಯಾತ್ರೆ ಬಿಣಗಾ, ಚೆಂಡಿಯಾ, ಅಮದಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚರಿಸಿ ಅಂಕೋಲಾ ತಾಲ್ಲೂಕಿನ ಅವರ್ಸಾ ಗ್ರಾಮಕ್ಕೆ ತಲುಪಿತು. ಪ್ರಮುಖರಾದ ಪ್ರಭಾಕರ ಮಾಳ್ಸೇಕರ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ, ದೀಪಕ್ ವೈಂಗಣಕರ್, ಖೈರುನ್ನಿಸಾ ಶೇಖ್, ಬಾಬು ಶೇಖ್, ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.