ಕುಮಟಾ: ‘ಪಠ್ಯದ ಆಚೆಯ ಎಷ್ಟೋ ಉತ್ತಮ ಪುಸ್ತಕಗಳನ್ನು ವಿದ್ಯಾರ್ಥಿ ಓದಿ ಅದರ ಅನುಭವವನ್ನು ಸ್ನೇಹಿತರು, ಶಿಕ್ಷಕರ ಜೊತೆ ಹಂಚಿಕೊಂಡರೆ ಅವರ ಜ್ಞಾನ ಹಿಗ್ಗಿ ಸಮಾಜದ ಪರಿಚಯವಾಗುತ್ತದೆ’ ಎಂದು ಶಾಲಾ ಪಠ್ಯ-ಪುಸ್ತಕ ಸಮಿತಿಗಳ ಅಧ್ಯಕ್ಷ ಡಾ. ಎಂ.ಜಿ. ಹೆಗಡೆ ಹೇಳಿದರು.
ಇಲ್ಲಿಯ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಸಪ್ನಾ ಬುಕ್ ಹೌಸ್ ವತಿಯಿಂದ ಗುರುವಾರ ಆರಂಭವಾದ ಮೂರು ದಿನಗಳ ಪುಸ್ತಕ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳ ಮೇಲೆ ಪಾಲಕರಿಂದ, ಉದ್ಯೋಗಪತಿಗಳಿಂದ ಇಂಥದ್ದೇ ಪಠ್ಯ ಓದಬೇಕು ಎನ್ನುವ ಸಹಜ ಒತ್ತಡ ಇರುತ್ತದೆ. ಓದಿದ್ದನ್ನು ಪರೀಕ್ಷೆಯಲ್ಲಿ ಬರೆದು ಪುನರುತ್ಪತ್ತಿ ಮಾಡಿ ಹೆಚ್ಚು ಅಂಕ ತೆಗೆಯುವ ಪ್ರಕ್ರಿಯೆಯಲ್ಲಿ ಅವರ ಮನಸ್ಥಿತಿ ಕುಗ್ಗುತ್ತದೆ. ಪಠ್ಯದಾಚೆ ಇರುವ ಅನೇಕ ಉತ್ತಮ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದಿ, ಚರ್ಚಿಸಿದರೆ ಸಹಜವಾಗಿ ಅವರ ಮನೋವಿಕಾಸವಾಗುತ್ತದೆ. ಅಂಥ ಅವಕಾಶವನ್ನು ಶಾಲೆಯಲ್ಲಿ ಕಲ್ಪಿಸುತ್ತಿರುವುದು ನಿಜಕ್ಕೂ ಮೆಚ್ಚುಗೆಯ ಸಂಗತಿ’ ಎಂದರು.
ಸಂಸ್ಥೆ ಅಧ್ಯಕ್ಷ ವಿ.ಆರ್. ನಾಯಕ, ಪದಾಧಿಕಾರಿಗಳಾದ ರಮೇಶ ಪ್ರಭು, ವಿಧಾತ್ರಿ ಅಕಾಡೆಮಿ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಚಾರ್ಯ ಕಿರಣ ಭಟ್, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ಸಂಸ್ಥೆಯ ಹಳೆಯ ವಿದ್ಯಾರ್ಥಿ ಅಹಲ್ಯಾ ಹೆಗಡೆ, ಉಪನ್ಯಾಸಕಿ ಫರ್ಜಾನ್ ಶೇಖ್ ಇದ್ದರು.