ಮುಂಡಗೋಡ: ಸಾಲ ಮಾಡಿ ಬೆಳೆಸಿದ ತೋಟಕ್ಕೆ ನೀರಿನ ಕೊರತೆ ಆಗಿರುವುದನ್ನು ಮನಸ್ಸಿಗೆ ಹಚ್ಚಿಕೊಂಡ ರೈತರೊಬ್ಬರು ಹೊಲದಲ್ಲಿಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲ್ಲೂಕಿನ ಇಂದೂರ ಗ್ರಾಮದ ಬಾಬಾಜಾನ ದಾವಲಸಾಬ ಹುಬ್ಬಳ್ಳಿ(63) ಆತ್ಮಹತ್ಯೆ ಮಾಡಿಕೊಂಡ ರೈತ. 2.14 ಎಕರೆ ಪ್ರದೇಶದಲ್ಲಿ ಅಡಿಕೆ ಹಾಗೂ ಬಾಳೆ ಬೆಳೆದಿದ್ದ. ಇರುವ ಎರಡು ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತದಿಂದ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಬೆಳೆ ಒಣಗುತ್ತಿರುವುದರ ಬಗ್ಗೆ ಚಿಂತಿಸುತ್ತಿದ್ದ ರೈತ ಬಾಬಾಜಾನ ಗುರುವಾರ ತೋಟಕ್ಕೆ ಹೋದವನು, ಅಲ್ಲಿಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬದವರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.