ಇನ್ನೊಂದು ಬಿಡಿ ನೆನಪು. ನಾನಾಗ ಎಸ್ಸೆಸ್ಸೆಲ್ಸಿ. ಎಲ್ಲರೂ ಪರೀಕ್ಷೆ ತಯಾರಿಯಲ್ಲಿದ್ದರೆ ನಾನು ಶೇಷಗಿರಿಯಲ್ಲಿ ನಡೆಯುತ್ತಿದ್ದ ‘ಉಷಾಹರಣ’ ನಾಟಕದ ರಿಹರ್ಸಲ್ಗೆ ಹೋಗುತ್ತಿದೆ. 1930ರ ನಾಟಕದ ಜಾದೂಗಾರ್ತಿ ಚಿತ್ರಲೇಖಾನ ಪಾತ್ರವನ್ನು ಕಲಿಯುತ್ತಿದ್ದೆ. ಊರ ಮಧ್ಯದ ಚಿಕ್ಕ ವೇದಿಕೆ ಮೇಲೆ ನಮ್ಮ ರಿಹರ್ಸಲ್. ಆ ಹೊತ್ತಿಗೆ ಊರಿನವರೆಲ್ಲ ಕೆಲಸ ಮುಗಿಸಿ ರಿಹರ್ಸಲ್ ನೋಡಲಿಕ್ಕೆ ಸೇರುತ್ತಿದ್ದರು. ನಟರಷ್ಟೇ ಇದ್ದು ನಾಟಕ ಮಾಡಿದರೆ ಚೆನ್ನಾಗಿರುತ್ತೆ ಎಂದು ನಾನು ಕಸಿವಿಸಿಪಡುತ್ತಿದ್ದೆ. ಆದರೆ ಹಲವು ವರ್ಷಗಳ ನಂತರ ಅರ್ಥವಾಗಲು ಶುರವಾಯ್ತು, ಅವನಿಗೆ ನಾಟಕ ಪ್ರದರ್ಶನಕ್ಕಿಂತ , ನಾಟಕ ಕಟ್ಟುವ ಪ್ರಕ್ರಿಯೆ ಮುಖ್ಯ ಎಂದು. ನಾಟಕ ಕಟ್ಟುವ ಪ್ರಕ್ರಿಯೆಯಲ್ಲಿ ಅವನು ಸಂಬಂಧ ಕಟ್ಟುವ ಪ್ರಕ್ರಿಯೆಯನ್ನು ಹುಡುಕೋದು. ನಾಟಕ ಹೆಚ್ಚು ಸಾಂಸ್ಥೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ, ಅಪ್ಪ ನಾಟಕವನ್ನು ಸಮುದಾಯದ ಸಹಜ ಕ್ರಿಯೆಯಾಗಿಸುವ ಕೆಲಸ ಮಾಡುತ್ತಾನೆ. ಚಂದದ ನಾಟಕ ಮಾಡುವುದಕ್ಕಿಂತ ಹೆಚ್ಚಾಗಿ, ನಾಟಕದ ಆಸಕ್ತಿ ಬೆಳೆಸಲು, ಹಲವು ಓದಿನ ಸಾಧ್ಯತೆ, ಓದುವ ಕ್ರಿಯೆಯ ಬೇರೆ ಬೇರೆ ಸ್ವರೂಪ ತೋರಿಸಲು ಅವನು ಶ್ರಮಪಡುತ್ತಾನೆ.