ಭಟ್ಕಳ: ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಗಿನಗುಂಡಿ ಬೀಚ್ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅನುಮತಿ ಪಡೆಯದೆ ಸಂಸದ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ಸೋಮವಾರ ಹನುಮಧ್ವಜ ಹಾರಿಸಲಾಯಿತು. ‘ವೀರ ಸಾವರ್ಕರ್ ಬೀಚ್’ ಎಂಬ ತಾತ್ಕಾಲಿಕ ಫಲಕವನ್ನು ಬಿಜೆಪಿ ಮುಖಂಡರು ಅಳವಡಿಸಿದರು.
ಅನುಮತಿ ಪಡೆಯದೆ ಅಳವಡಿಸಿದ್ದ ನಾಮಫಲಕವನ್ನು ಜನವರಿ 27ರಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದ್ದರು. ಘಟನೆಗೆ ಸಂಬಂಧಿಸಿ ಆಗ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸಿದ್ದರು. ಅದೇ ಸ್ಥಳದಲ್ಲಿ ಹನುಮಧ್ವಜ ಹಾರಿಸಿ, ನಾಮಫಲಕ ಅಳವಡಿಸಲಾಗಿದೆ.
ಈ ವೇಳೆ ಸಂಸದ ಅನಂತಕುಮಾರ ಹೆಗಡೆ ಮಾತನಾಡಿ, ‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣದಲ್ಲಿ ತೊಡಗಿದೆ. ಅವರು ಸಿದ್ದರಾಮಯ್ಯ ಅಲ್ಲ ಸಿದ್ರಾಮುಲ್ಲ ಖಾನ್’ ಎಂದರು.
‘ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯದೆ ಹನುಮಧ್ವಜ ಹಾರಿಸುವುದರ ಜೊತೆಗೆ ವೀರ ಸಾವರ್ಕರ್ ಹೆಸರಿನಲ್ಲಿ ನಾಮಫಲಕ ಅಳವಡಿಸಿದ್ದಾರೆ. ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರ ನಿರ್ದೇಶನ ಪಾಲಿಸಲಾಗುವುದು’ ಎಂದು ಹೆಬಳೆ ಗ್ರಾಮ ಪಂಚಾಯಿತಿ ಪಿಡಿಒ ಮಂಜುನಾಥ ಗೊಂಡ ‘ಪ್ರಜಾವಾಣಿ’ಗೆ ತಿಳಿಸಿದರು.
ಭಟ್ಕಳ ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಗಿನಗುಂಡಿ ಬೀಚ್ ಬಳಿ ಹನುಮಧ್ವಜ ಹಾರಿಸಿ ವೀರ ಸಾವರ್ಕರ್ ಬೀಚ್ ಹೆಸರಿನ ನಾಮಫಲಕ ಅಳವಡಿಸಿರುವುದು