ಕಾರವಾರ: ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಜೋರು ಮಳೆ ಮುಂದುವರಿದಿದೆ.ಕುಮಟಾದ ಐ.ಸಿ.ಐ.ಸಿ ಬ್ಯಾಂಕ್ ಪಕ್ಕದ ಬೃಹತ್ ಆಲದ ಮರ ಮಂಗಳವಾರ ಬೆಳಗಿನ ಜಾವ ಧರೆಗುರುಳಿತು.
ಇದರಿಂದ ಹಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ಬೆಳಗಿನ ಜಾವ ಮರ ಬಿದ್ದ ಕಾರಣ, ಯಾರಿಗೂ ಯಾವುದೇ ವಾಹನಗಳಿಗೂ ಹಾನಿಯಾಗಿಲ್ಲ. ನಂತರ ಪುರಸಭೆ ನೌಕರರು, ಅಗ್ನಿ ಶಾಮಕದಳದ ಸಿಬ್ಬಂದಿ ಮರವನ್ನು ತೆರವು ಮಾಡಿದರು.
ಅರಬ್ಬಿ ಸಮುದ್ರ ಮತ್ತಷ್ಟು ಪ್ರಕ್ಷುಬ್ಧಗೊಂಡಿದ್ದು, ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಕಾರವಾರದ ದೇವಭಾಗ, ರವೀಂದ್ರನಾಥ ಟ್ಯಾಗೋರ್ ಕಡಲತೀರ, ಹೊನ್ನಾವರದ ವಿವಿಧೆಡೆ ಕಡಲ್ಕೊರೆತ ತೀವ್ರಗೊಂಡಿದೆ.