ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನಮಠದಲ್ಲಿ ಅದ್ದೂರಿ ಜಂಬೂ ಸವಾರಿ

ಶಿರಸಿ ತಾಲ್ಲೂಕಿನ ವಿವಿಧೆಡೆ ವಿಜಯದಶಮಿ ಆಚರಣೆ
Last Updated 5 ಅಕ್ಟೋಬರ್ 2022, 13:18 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನೆಲ್ಲೆಡೆ ವಿಜಯ ದಶಮಿ ಆಚರಣೆ ಬುಧವಾರ ನಡೆದಿದ್ದು ಜೈನ ಸಮುದಾಯದವರ ಪುಣ್ಯಕ್ಷೇತ್ರ ಸ್ವಾದಿ ದಿಗಂಬರ ಜೈನಮಠದಲ್ಲಿ ವೈಭವೋಪೇತ ಜಂಬೂ ಸವಾರಿ ನಡೆಯಿತು.

ಕೂಷ್ಮಾಂಡಿನಿ ದೇವಿಯ ಮೂರ್ತಿ ಇದ್ದ ಅಂಬಾರಿ ಹೊತ್ತ ಆನೆ, ಕುದುರೆ, ಪಲ್ಲಕ್ಕಿಯೊಂದಿಗೆ ಮೆರವಣಿಗೆ ನಡೆಸಲಾಯಿತು. ಮಧ್ಯಾಹ್ನದ 12 ಗಂಟೆ ಹೊತ್ತಿಗೆ ಜಂಬೂ ಸವಾರಿಗೆ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಚಾಲನೆ ನೀಡಿದರು. ‘ಪ್ರತಿಯೊಬ್ಬರ ಬಾಳಿನಲ್ಲೂ ವಿಜಯ ದಶಮಿ ಗೆಲುವು ತರಲಿ’ ಎಂದು ಭಕ್ತರನ್ನು ಹಾರೈಸಿದರು.

ಅಂಬಾರಿಯ ಜತೆಗೆ ನೇಮಿನಾಥ ತೀರ್ಥಂಕರ ಹಾಗೂ ಆಚಾರ್ಯ ಅಕಲಂಕ ಅವರ ಮೂರ್ತಿ ಇದ್ದ ಪಲ್ಲಕ್ಕಿಯನ್ನು ಮೆರವಣಿಗೆ ಮೂಲಕ ಮಠದಿಂದ ಅನತಿ ದೂರದಲ್ಲಿರುವ ಪೂರ್ವಾಚಾರ್ಯರ ನಿಷಧಿವರೆಗೆ ಒಯ್ಯಲಾಯಿತು. ಪೂಜೆ ಸಲ್ಲಿಸಿದ ಬಳಿಕ ಭಟ್ಟಾಕಲಂಕ ಬಟ್ಟಾರಕ ಸ್ವಾಮೀಜಿ ಗಜಕೇಸರಿ ಪೀಠಾರೋಹಣ ಮಾಡಿದರು.

ಬನ್ನಿ ಮರಕ್ಕೆ ಪೂಜೆ: ಸೋಂದಾದ ತಾಲ್ಲೂಕಿನ ಸ್ವರ್ಣವಲ್ಲಿ ಮಠ, ವಾದಿರಾಜ ಮಠದಲ್ಲಿ ವಿಶೇಷ ಪೂಜೆ ನಡೆದವು. ಪಲ್ಲಕ್ಕಿ ಮೆರವಣಿಗೆ ಮೂಲಕ ತೆರಳಿ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಲಾಯಿತು.

ನಗರದ ಯಲ್ಲಾಪುರ ರಸ್ತೆಯಲ್ಲಿರುವ ಬನ್ನಿ ಮರಕ್ಕೆ ಮಹಿಳೆಯರು ಸರತಿಯಲ್ಲಿ ನಿಂತು ಪೂಜೆ ಸಲ್ಲಿಸಿದ್ದರು. ನಗರದ ಮಾರಿಕಾಂಬಾ ದೇವಸ್ಥಾನ, ಬನವಾಸಿ, ಮಣ್ಮನೆ, ದೇವತೆಮನೆ, ಸರಕುಳಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT