ಕಾರವಾರ: ಜಿಲ್ಲೆಯಾದ್ಯಂತ ಮಳೆ ಅಬ್ಬರ ಗುರುವಾರವೂ ಮುಂದುವರೆದಿದ್ದು ಭಟ್ಕಳ ತಾಲ್ಲೂಕಿನ ಮಲ್ಲಾರಿಯಲ್ಲಿ ಸೇತುವೆ ಮುರಿದು ಬಿದ್ದಿದೆ.
ಬುಧವಾರ ಸಂಜೆಯ ವೇಳೆಗೆ ಬಿಡುವು ನೀಡಿದ್ದ ಮಳೆ ತಡರಾತ್ರಿಯಿಂದ ನಿರಂತರವಾಗಿ ಸುರಿಯ ತೊಡಗಿತು.
ಮಲ್ಲಾರಿ ಗ್ರಾಮದ ಸೇತುವೆ ಮುರಿದಿದ್ದರಿಂದ ಜನರಿಗೆ ಮುಖ್ಯ ರಸ್ತೆಗೆ ತೆರಳಲು ಸಂಪರ್ಕ ಇಲ್ಲದಂತಾಗಿತ್ತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಿಪತ್ತು ನಿರ್ವಹಣಾ ದಳದ ಬೆಂಗ್ರೆ ಘಟಕದವರು ಸೇತುವೆ ಸಮೀದಪಲ್ಲಿ ತಾತ್ಕಾಲಿಕ ಕಾಲು ಸಂಕ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟರು.
ಗಂಗಾವಳಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರ-ಹೆಗ್ಗಾರ ಸಂಪರ್ಕಿಸಲು ಸ್ಥಳೀಯರು ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಸೇತುವೆಯು ಮುಳುಗಿತು. ಇದರಿಂದ ಹೆಗ್ಗಾರ, ಸೇರಿದಂತೆ ಸುತ್ತಲಿನ ಐದಕ್ಕೂ ಹೆಚ್ಚು ಗ್ರಾಮಗಳಿಗೆ ಯಲ್ಲಾಪುರದ ಸಂಪರ್ಕ ತಪ್ಪುವಂತಾಗಿದೆ.
ಭಾರಿ ಮಳೆ ಗಾಳಿಗೆ ಶಿರಸಿ ತಾಲ್ಲೂಕಿನ ನೀರಕೋಣೆಯಲ್ಲಿ ದೊಡ್ಡ ಗಾತ್ರದ ಮರ ಉರುಳಿ ಬಿದ್ದು ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭಟ್ಕಳ ತಾಲ್ಲೂಕಿನ ಹಲವೆಡೆ ಜಲಾವೃತ ಸಮಸ್ಯೆ ಮುಂದುವರೆದಿದೆ.
ಕಾರವಾರ ತಾಲ್ಲೂಕಿನ ಅರ್ಗಾ, ಇಡೂರು, ಚೆಂಡಿಯಾ ಭಾಗದಲ್ಲಿ ಜಲಾವೃತ ಸಮಸ್ಯೆ ಮುಂದುವರೆದಿದ್ದು, ಪೋಸ್ಟ್ ಚೆಂಡಿಯಾದಲ್ಲಿ ಗುಡ್ಡ ಮತ್ತಷ್ಟು ಕುಸಿಯಬಹುದು ಎಂಬ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.