ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಮೂಲೆಗುಂಪಾಗುತ್ತಿರುವ ಸಾರ್ವಜನಿಕ ಶೌಚಾಲಯ

ನಿರ್ವಹಣೆಗೆ ನಿರ್ಲಕ್ಷ್ಯ; ಕಾಣದ ಸ್ವಚ್ಛತೆ: ಜನರ ಆರೋಗ್ಯಕ್ಕೂ ಮಾರಕವಾಗುವ ಭೀತಿ
Published 7 ಆಗಸ್ಟ್ 2023, 5:57 IST
Last Updated 7 ಆಗಸ್ಟ್ 2023, 5:57 IST
ಅಕ್ಷರ ಗಾತ್ರ

ಕಾರವಾರ: ಎಲ್ಲೆಡೆ ಸ್ವಚ್ಛ ಭಾರತದ ಘೋಷಣೆಯದ್ದೇ ಸದ್ದು ಕೇಳಿ ಬಹಳ ವರ್ಷವೇನೂ ಆಗಿಲ್ಲ. ಆದರೆ ಅವುಗಳ ಕಾರ್ಯರೂಪ ಮಾತ್ರ ಇಂದಿಗೂ ಕಷ್ಟವಾಗಿದೆ. ನಗರ, ಪಟ್ಟಣ ವ್ಯಾಪ್ತಿಯ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಗಮನಿಸಿದರೆ ‘ಸ್ವಚ್ಛ ಭಾರತ’ ಸಾಕಾರಗೊಳ್ಳಲು ಕಾಲ ಇನ್ನೂ ಸಾಕಷ್ಟು ದೂರವಿದೆ ಎಂದು ಅನ್ನಿಸದೆ ಇರದು.

ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಲ್ಲೇ ಶೌಚಾಲಯಗಳ ಸ್ಥಿತಿ ಚೆನ್ನಾಗಿಲ್ಲ. ಹೊರಗಿನಿಂದ ಬಂದವರು ಇಲ್ಲಿನ ಶೌಚಗೃಹ, ಸ್ನಾನಗೃಹದ ಸ್ಥಿತಿ ಕಂಡು ಮೂಗುಮುಚ್ಚಿ ಹೋಗುತ್ತಾರೆ. ಜಿಲ್ಲಾಕೇಂದ್ರ ಕಾರವಾರದಲ್ಲಿ ಕಡಲತೀರದಲ್ಲಿರುವ ಶೌಚಾಲಯಗಳ ಹೊರತಾಗಿ ನಗರ ವ್ಯಾಪ್ತಿಯಲ್ಲಿ ಬೆರಳೆಣಿಕೆಯಷ್ಟು ಶೌಚಗೃಹಗಳು ಮಾತ್ರ ನಿರ್ವಹಣೆ ಕಾಣುತ್ತಿವೆ. ಕೋಡಿಬಾಗದಲ್ಲಿರುವ ಶೌಚಾಲಯ ನಿರ್ವಹಣೆ ಕಾಣದೆ ದುಸ್ಥಿತಿಗೆ ತಲುಪಿದೆ. ಇಲ್ಲಿಂದ ಕೂಗಳತೆ ದೂರದಲ್ಲಿರುವ ನಿವಾಸಿಗಳು ಮೂಗುಮುಚ್ಚಿಕೊಂಡು ದಿನದೂಡಬೇಕಾದ ಸ್ಥಿತಿ ಇದೆ.

‘ನಗರ ವ್ಯಾಪ್ತಿಯ ನಂದನಗದ್ದಾ, ಕಾಜುಬಾಗ, ಹಬ್ಬುವಾಡಾ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳೇ ಇಲ್ಲ. ಕಾರ್ಮಿಕರು ಹೆಚ್ಚಿರುವ ಪ್ರದೇಶದಲ್ಲಿಯೂ ಇದೇ ಸ್ಥಿತಿ ಇದೆ’ ಎನ್ನುತ್ತಾರೆ ಸಂತೋಷ ಶೆಟ್ಟಿ.

ಶಿರಸಿ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳು ಹಾಗೂ ಮೂತ್ರಾಲಯಗಳು ಸ್ವಚ್ಛತೆಯಿಲ್ಲದ ಕಾರಣ ಜನರು ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಹಳೆ ಬಸ್ ನಿಲ್ದಾಣದ ಸಮೀಪ, ಶಿವಾಜಿ ಚೌಕ, ಜೂ ಸರ್ಕಲ್, ಮೀನುಗಾರಿಕಾ ಇಲಾಖೆ ಸಮೀಪ, ಕೋಟೆಕೆರೆ, ಸಾಮ್ರಾಟ ಹೋಟೆಲ್ ಎದುರು ಭಾಗದಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಲಯಗಳಿವೆ. ಆದರೆ ನಿರ್ವಹಣೆ ಇಲ್ಲದೆ  ಕಟ್ಟಡಗಳ ಸುತ್ತಮುತ್ತ ಕೊಳಚೆ, ತ್ಯಾಜ್ಯ ಸಂಗ್ರಹವಾಗುತ್ತಿದೆ.

ಯಲ್ಲಾಪುರ ಪಟ್ಟಣದ ಹೊಸ ತರಕಾರಿ ಮಾರುಕಟ್ಟೆಯ ಬಳಿ ಇರುವ ಸಾರ್ವಜನಿಕ ಶೌಚಾಲಯ ಮತ್ತು ಕಾಳಮ್ಮನಗರದ ತಾಲ್ಲೂಕು ಕ್ರೀಡಾಂಗಣದಲ್ಲಿರುವ ಶೌಚಾಲಯಗಳು ನೀರಿನ ಕೊರತೆಯಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪ್ರತಿ ಭಾನುವಾರ ಯಲ್ಲಾಪುರದ ಸಂತೆ. ಹಾಗಾಗಿ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಇರುತ್ತದೆ. ಆದರೆ ತರಕಾರಿ ಮಾರುಕಟ್ಟೆ ಬಳಿ ಇರುವ ಸಾರ್ವಜನಿಕ ಶೌಚಾಲಯದಲ್ಲಿ ನೀರೇ ಇಲ್ಲ, ಶೌಚಾಲಯದ ಕೆಲ ಬಾಗಿಲುಗಳಿಗೆ ಚಿಲಕವೂ ಇಲ್ಲ ಎಂಬ ದೂರುಗಳಿವೆ‌.

‘ಕೆಲಸಗಾರರ ಕೊರತೆಯಿಂದಾಗಿ ಶೌಚಾಲಯಗಳನ್ನು ಎರಡು ದಿನಕ್ಕೊಮ್ಮೆ ಶುಚಿಗೊಳಿಸಲಾಗುತ್ತದೆ’ ಎನ್ನುತ್ತಾರೆ ಪಟ್ಟಣ ಪಂಚಾಯ್ತಿ ಆರೋಗ್ಯ ನಿರೀಕ್ಷಕ ಗುರು ಗುದಗಿ.

ಮುಂಡಗೋಡ ಪಟ್ಟಣ ಪಂಚಾಯಿತಿಯ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯದ ನಿರ್ವಹಣೆಯನ್ನು ಟೆಂಡರ್‌ ಮೂಲಕ ಬೇರೆಯವರಿಗೆ ನೀಡಲಾಗಿದೆ. ಇಲ್ಲಿ ಬಳಕೆಗೆ ಶುಲ್ಕ ಕೊಡಬೇಕಾಗಿದೆ. ಬಂಕಾಪುರ ರಸ್ತೆಯ ಪಟ್ಟಣ ಪಂಚಾಯಿತಿ ಮಳಿಗೆ ಪಕ್ಕದಲ್ಲಿರುವ ಶೌಚಾಲಯದ ನಿರ್ವಹಣೆಯ ಬಗ್ಗೆ ಆಗಾಗ ದೂರುಗಳು ಕೇಳಿಬರುತ್ತಿವೆ.

ಕೆಲವೆಡೆ ಶೌಚಾಲಯಗಳಿದ್ದರೂ ದುರ್ವಾಸನೆ ಬರುತ್ತಿದೆ ಎಂಬ ಕಾರಣಕ್ಕೆ ಅವುಗಳ ಬಳಕೆ ಮಾಡುವುದೂ ಕಡಿಮೆಯಾಗುತ್ತಿದೆ. ಇಲ್ಲಿನ ಶಿವಾಜಿವೃತ್ತದ ಆಸುಪಾಸಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಬೇಡಿಕೆಯಿದೆ. ‘ಸಂಚಾರಿ ಶೌಚಾಲಯದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪಟ್ಟಣ ಪಂಚಾಯಿತಿ ಎಂಜಿನಿಯರ್‌ ಶಂಕರ ದಂಡಿನ್‌ ಹೇಳುತ್ತಾರೆ.

ಭಟ್ಕಳ ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ ಹಾಗೂ ಶಂಶುದ್ದೀನ್ ವೃತ್ತದ ಬಳಿಯ ಬಂದರ ರಸ್ತೆ‌ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯ ಸಮರ್ಪಕವಾಗಿ ನಿರ್ವಹಣೆ ಕಾಣುತ್ತಿಲ್ಲ ಎಂಬ ದೂರುಗಳಿವೆ. ಪಟ್ಟಣದಲ್ಲಿ ಹಳೇ ಬಸ್ ನಿಲ್ದಾಣ, ಹೂವಿನ ಮಾರುಕಟ್ಟೆ ಹಾಗೂ ರಂಗಿನಕಟ್ಟೆ ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ದಾಂಡೇಲಿ ನಗರದಲ್ಲಿ  ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದೆ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ. ‘ನಗರದಲ್ಲಿ ಒಟ್ಟು 34 ಶೌಚಾಲಯವಿದ್ದು ಕುಳಗಿ ರಸ್ತೆ, ಬಾಂಬೆ ಚಾಳ ಸೇರಿದಂತೆ ಹಲವು ಕಡೆ ಶೌಚಾಲಯ ದುರಸ್ತಿ ಮಾಡಲಾಗಿದೆ’ ಎಂದು  ನಗರಸಭೆ ಆರೋಗ್ಯ ಅಧಿಕಾರಿ ವಿಲಾಸ್ ದೇವಕರ ಹೇಳುತ್ತಾರೆ.

‘ಕುಳಗಿ ರಸ್ತೆಯ ಬಳಿ ನಿರ್ಮಾಣ ಮಾಡಿರುವ ಶೌಚಾಲಯಕ್ಕೆ ಸಾಗಲು ದಾರಿ, ನೀರಿನ ವ್ಯವಸ್ಥೆ ಇಲ್ಲ. ಹೀಗಾದರೆ ಹೇಗೆ ಬಳಸಬೇಕು’ ಎಂದು ಪ್ರಶ್ನಿಸುತ್ತಾರೆ ಕುಳಗಿ ರಸ್ತೆಯ ವ್ಯಾಪಾರಿ ಸುಧೀರ್.

ಅಂಕೋಲಾ ಪಟ್ಟಣ ವ್ಯಾಪ್ತಿಯಲ್ಲಿ ಮೂರು ಸಾರ್ವಜನಿಕ ಶೌಚಾಲಯವಿದ್ದು  ಯಾವುದೂ ಸಾರ್ವಜನಿಕರ ಉಪಯೋಗಕ್ಕೆ ಉತ್ತಮವಿಲ್ಲ ಎಂಬುದು ಜನರ ಆರೋಪ. ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡಲು ಆಟದ ಮೈದಾನ, ಇನ್ನಿತರ ಖಾಲಿ ಜಾಗ ಹುಡುಕಾಡುವ ಸ್ಥಿತಿ ಇದೆ. ಪಟ್ಟಣದ ಹೃದಯ ಭಾಗವಾದ ಆಟದ ಮೈದಾನ ಮೂತ್ರ ವಿಸರ್ಜನೆಯಿಂದಾಗಿ ಗಬ್ಬು ನಾರುತ್ತಿದೆ. ‘ಶೌಚಾಲಯದ ಅವ್ಯವಸ್ಥೆ ಬಗ್ಗೆ ಈಗಾಗಲೆ ದೂರು ಬಂದಿದ್ದು, ಸಮಸ್ಯೆ ಬಗೆಹರಿಸುತ್ತೇವೆ’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ.

ಹೊನ್ನಾವರ ಪಟ್ಟಣದಲ್ಲಿ ಬಹುತೇಕ ಶೌಚಾಲಯಗಳು ಇದ್ದೂ ಇಲ್ಲದಂತಾಗಿವೆ. ತುಳಸೀನಗರ, ಉದ್ಯಮನಗರ, ಬಂದರು ಮೊದಲಾದೆಡೆ ಶೌಚಾಲಯಗಳ ನಿರ್ಮಾಣಕ್ಕೆ ಬೇಡಿಕೆ ಇದೆ. ಬಾಜಾರ್‌ನಲ್ಲಿನ ಶೌಚಾಲಯ ತೀರ ದುಃಸ್ಥಿತಿಯಲ್ಲಿರುವುದರಿಂದ ಹೊಸದಾಗಿ ಅಲ್ಲಿ ಶೌಚಾಲಯ ನಿರ್ಮಾಣ ಮಾಡುವ ಪ್ರಸ್ತಾವ ಪಟ್ಟಣ ಪಂಚಾಯಿತಿ ಮುಂದಿದೆ.

‘ಪೌರಕಾರ್ಮಿಕರ ಕೊರತೆ ಇದೆ. ಆದರೂ ಎಲ್ಲ ಸಾರ್ವಜನಿಕ ಶೌಚಾಲಯಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಲಾಗುತ್ತಿದೆ’ ಎಂಬುದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವೆಂಕಟೇಶ ನಾಯ್ಕ ಅಭಿಪ್ರಾಯ.

––––––––––––

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಸಂತೋಷಕುಮಾರ ಹಬ್ಬು, ರವಿ ಸೂರಿ, ಜ್ಞಾನೇಶ್ವರ ದೇಸಾಯಿ, ಎಂ.ಜಿ.ಹೆಗಡೆ, ಪ್ರವೀಣಕುಮಾರ ಸುಲಾಖೆ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ್, ಮೋಹನ ನಾಯ್ಕ, ಮೋಹನ ದುರ್ಗೇಕರ್.

ಹೊನ್ನಾವರ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿ ಎದುರು ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಶೌಚಾಲಯ ಗಿಡಗಂಟಿಗಳಿಂದ ಆವೃತವಾಗಿದೆ
ಹೊನ್ನಾವರ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿ ಎದುರು ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಶೌಚಾಲಯ ಗಿಡಗಂಟಿಗಳಿಂದ ಆವೃತವಾಗಿದೆ
ಅಂಕೋಲಾ ಪಟ್ಟಣದ ಮಾರುಕಟ್ಟೆಯಲ್ಲಿರುವ ಮಹಿಳೆಯರ ಶೌಚಾಲಯದಲ್ಲಿ ಪುರುಷ ಸಿಬ್ಬಂದಿಯೊಬ್ಬ ಬಟ್ಟೆಗಳನ್ನು ಒಣಗಿಸಿಟ್ಟು ಅರೆನಗ್ನ ಅವಸ್ಥೆಯಲ್ಲಿರುವುದು
ಅಂಕೋಲಾ ಪಟ್ಟಣದ ಮಾರುಕಟ್ಟೆಯಲ್ಲಿರುವ ಮಹಿಳೆಯರ ಶೌಚಾಲಯದಲ್ಲಿ ಪುರುಷ ಸಿಬ್ಬಂದಿಯೊಬ್ಬ ಬಟ್ಟೆಗಳನ್ನು ಒಣಗಿಸಿಟ್ಟು ಅರೆನಗ್ನ ಅವಸ್ಥೆಯಲ್ಲಿರುವುದು
ಹಳಿಯಾಳದ ಎ.ಪಿ.ಎಂ.ಸಿ ಆವರಣದಲ್ಲಿ ನಿರ್ಮಿಸಿದ ಹೈಟೆಕ್ ಶೌಚಾಲಯದ ಆವರಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿಡಲಾಗಿತ್ತು
ಹಳಿಯಾಳದ ಎ.ಪಿ.ಎಂ.ಸಿ ಆವರಣದಲ್ಲಿ ನಿರ್ಮಿಸಿದ ಹೈಟೆಕ್ ಶೌಚಾಲಯದ ಆವರಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿಡಲಾಗಿತ್ತು
ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಸರಿಯಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಜನರ ದೂರು ಆಧರಿಸಿ ಕ್ರಮವಹಿಸುತ್ತೇವೆ
ಯಾಕೂಬ್ ಶೇಖ್ ನಗರಸಭೆ ಆರೋಗ್ಯ ನಿರೀಕ್ಷಕ
ನಗರಸಭೆ ವ್ಯಾಪ್ತಿಯ ಎಲ್ಲ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ಪರಿಶೀಲಿಸಿ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಾಗುವುದು
ಕಾಂತರಾಜ್ ಪೌರಾಯುಕ್ತ ಶಿರಸಿ ನಗರಸಭೆ
ಯಲ್ಲಾಪುರ ತರಕಾರಿ ಮಾರುಕಟ್ಟೆಯಲ್ಲಿರುವ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಬೇಕು
ವಿನಾಯಕ ಮರಾಠೆ ಯಲ್ಲಾಪುರ
ರಾಮನಗರ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಪಕ್ಕದಲ್ಲಿ ಓಡಾಡಲು ಆಗುವುದಿಲ್ಲ
ರಾಮು ಗಾವಡೆ ರಾಮನಗರ ನಿವಾಸಿ
ಪ್ರವಾಸೋದ್ಯಮದಲ್ಲಿ ಪ್ರಸಿದ್ಧಿ ಪಡೆದ ಗೋಕರ್ಣದ ಬೀಚಿನಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಯಾವುದೇ ಸರಿಯಾದ ಶೌಚಾಲಯವಿಲ್ಲ
ಎಚ್.ಎಸ್.ನರೇಶ್ ಪ್ರವಾಸಿಗ

ಜನರ ವಿರೋಧ...! ಹಳಿಯಾಳ ಪಟ್ಟಣದ ಕೋರ್ಟ್ ಎ.ಪಿ.ಎಂ.ಸಿ ಪ್ರಾಂಗಣದ ಬಳಿ ಟೊಯೊಟಾ ಕಂಪನಿಯ ಸಾಮಾಜಿಕ ನಿಧಿಯಲ್ಲಿ ನಿರ್ಮಿಸಿದ ಹೈಟೆಕ್ ಶೌಚಾಲಯ ಮತ್ತು ಸ್ನಾನಗೃಹ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಅರ್ಬನ್ ಬ್ಯಾಂಕ್ ವೃತ್ತ ಪೇಟೆಯ ಮಧ್ಯಭಾಗದಲ್ಲಿ ಮೀನು ಮಾರುಕಟ್ಟೆ ಯಲ್ಲಾಪುರ ನಾಕಾ ಹತ್ತಿರ ಸಾರ್ವಜನಿಕ ಶೌಚಾಲಯದ ಅಗತ್ಯವಿದೆ ಎನ್ನುತ್ತಾರೆ ಸಾರ್ವಜನಿಕರು. ಕೆಲವು ಶೌಚಾಲಯ ಸಾರ್ವಜನಿಕರ ದ್ವಿಚಕ್ರವಾಹನ ನಿಲುಗಡೆ ತಾಣವಾಗಿ ಮಾರ್ಪಟ್ಟಿದೆ. ಶೌಚಾಲಯ ಶುಚಿ ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಕೆಲವು ಕಡೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಆದರೆ ಸ್ಥಳೀಯರ ವಿರೋಧದ ಕಾರಣಕ್ಕೆ ಅವು ನನೆಗುದಿಗೆ ಬಿದ್ದಿದೆ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಅಶೋಕ್ ಸಾಳೆನ್ನವರ.

ಉಪ್ಪು ನೀರೆ ಗತಿ ಗೋಕರ್ಣದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿಯ ಮೇನ್ ಬೀಚ್‌ನಲ್ಲಿ ಕಟ್ಟಲ್ಪಟ್ಟ ಶೌಚಾಲಯದ ಬಳಕೆಗೆ ಉಪ್ಪು ನೀರೇ ಗತಿಯಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ಅನೇಕ ಪ್ರವಾಸಿಗರು ದೂರುಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ನಿರ್ವಹಣೆ ಸಲುವಾಗಿ ಜನರಿಂದ ಶುಲ್ಕ ಪಡೆಯಲಾಗುತ್ತದೆ. ಸ್ನಾನಕ್ಕೂ ಉಪ್ಪು ನೀರನ್ನೇ ಕೊಡಲಾಗುತ್ತಿದೆ ಎಂಬುದು ಪ್ರವಾಸಿಗರ ಆರೋಪ. ಓಂ ಬೀಚ್ ಕುಡ್ಲೆ ಬೀಚ್ ನಲ್ಲಂತೂ ಸಾರ್ವಜನಿಕ ಶೌಚಾಲಯವೇ ಇಲ್ಲ. ಪ್ರವಾಸೋಧ್ಯಮ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ವತಃ ಮಹಿಳಾ ಆಯೋಗದ ಅಧ್ಯಕ್ಷರೇ ಶೌಚಾಲಯ ನಿರ್ಮಿಸುವಂತೆ ಸೂಚಿಸಿದರೂ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ನಿರ್ವಹಣೆಗೆ ಆದಾಯ ಸಾಲದು ಜೊಯಿಡಾ ತಾಲ್ಲೂಕು ಕೇಂದ್ರದಲ್ಲಿ ಪಂಚಾಯ್ತಿ ವತಿಯಿಂದ ನಿರ್ವಹಣೆ ಮಾಡುತ್ತಿರುವ ಸಾರ್ವಜನಿಕ ಶೌಚಾಲಯ ಆದಾಯದ ಕೊರತೆಯಿಂದ ಯಾರೂ ಗುತ್ತಿಗೆ ಪಡೆಯದೇ ಇರುವುದರಿಂದ ಬಹುತೇಕ ಸಮಯದಲ್ಲಿ ಬಂದ್ ಇರುತ್ತಿದೆ. ಜೊಯಿಡಾ ಗ್ರಾಮ ಪಂಚಾಯ್ತಿ ವತಿಯಿಂದ ಮಾಸಿಕ ₹ 3000 ವೇತನ ನೀಡಿ ಅಂಗವಿಕಲರೊಬ್ಬರನ್ನು ಶೌಚಾಲಯ ನಿರ್ವಹಣೆಗೆ ನೇಮಿಸಲಾಗಿದೆ. ನೀರಿನ ಸಂಗ್ರಹದ  ಕೊರತೆ ಹಾಗೂ ಶೌಚ ಸಂಗ್ರಹಣೆ ಟ್ಯಾಂಕ್ ಗಾತ್ರದಲ್ಲಿ ಸಣ್ಣದಿರುವುದರಿಂದ ಪದೇ ಪದೆ ನಿರ್ವಹಣೆ ಸಮಸ್ಯೆ ಎದುರಾಗುತ್ತಿದೆ.

ದೂರು ಬಂದರೆ ಕ್ರಮ ಸಿದ್ದಾಪುರ ಪಟ್ಟಣದ ಮಾರುಕಟ್ಟೆಯಲ್ಲಿರುವ ಶೌಚಾಲಯ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡಲಾಗಿದೆ. ಹೊರಗುತ್ತಿಗೆಗೆ ನೀಡಲಾದ ಶೌಚಾಲಯಲ್ಲಿ ಮೂತ್ರಾಲಯ ಬಳಕೆ ಉಚಿತವಾಗಿದ್ದರೂ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು ಗುತ್ತಿಗೆ ಪಡೆದವರಿಗೆ ಹಣ ಪಡೆಯದಂತೆ ಸೂಚನೆ ನೀಡಲಾಗಿದೆ. ಮೂತ್ರಾಲಯ ಬಳಕೆಗೆ ಹಣ ಪಡೆದ ಆರೋಪ ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಐ.ಜಿ.ಕೊಣ್ಣೂರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT