ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿ ಸಲ್ಲಿಸಿದ ಅರ್ಜಿಯ ಕಡತ ಹುಡುಕಿ ಕೊಡಲು ಹಾಗೂ ಕರ್ತವ್ಯ ಚ್ಯುತಿ ಎಸಗಿದ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಿದ್ದಾಪುರ ತಾಲ್ಲೂಕಿನ ಹಲಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾರ್ಗರೇಟ್ ಕಾರ್ಲೂಯಿಸ್ ಫರ್ನಾಂಡಿಸ್ ಡಿವೈಎಸ್ಪಿ ಗಣೇಶ ಕೆ.ಎಲ್ ಅವರಿಗೆ ಶನಿವಾರ ದೂರು ನೀಡಿದ್ದಾರೆ.
‘ಸಿದ್ಧಾಪುರ ತಾಲ್ಲೂಕಿನ ಕೋಡ್ಕಣಿ ಗ್ರಾಮದ ಅರಣ್ಯ ಸರ್ವೆ ನಂ.8ರಲ್ಲಿ 5 ಗುಂಟೆ ಕ್ಷೇತ್ರದ ಮಂಜೂರಾತಿಗೆ ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಜಾಗವು ಜಿ.ಪಿ.ಎಸ್ ಆಗಿದ್ದು, ಗ್ರಾಮ ಅರಣ್ಯ ಹಕ್ಕು ಸಮಿತಿಯಿಂದ ಅರ್ಜಿ ಮಂಜೂರಿಗೆ ಶಿಪಾರಸ್ಸು ಆಗಿದೆ. ಆದರೆ ಅರಣ್ಯ ಹಕ್ಕು ಸಮಿತಿ ಅವರು ನೀಡಿದ ಎಲ್ಲಾ ಅರ್ಜಿಗಳು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಗ್ರಾಮ ಪಂಚಾಯ್ತಿ ಅಭಿವೃಧ್ದಿ ಅಧಿಕಾರಿ ಲಿಖಿತ ಉತ್ತರ ನೀಡಿದ್ದರೆ, ಸಮಾಜ ಕಲ್ಯಾಣ ಇಲಾಖೆ ಕಚೇರಿಯಿಂದ ಅರ್ಜಿ ಕಚೇರಿಗೆ ಬಂದಿಲ್ಲ ಎಂಬ ಉತ್ತರ ನೀಡಲಾಗುತ್ತಿದೆ. ಕಳೆದುಹೋದ ಅರ್ಜಿ ಹುಡುಕಿಕೊಡಿ’ ಎಂದು ದೂರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ಶಿರಸಿ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಮಾಳ್ಳಕ್ಕನವರ, ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಕಾರ್ಲೂಸ್ ಆಗ್ನಲ್ ಫರ್ನಾಂಡಿಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.