ಮುಂಡಗೋಡ: ಪವಿತ್ರ ಉಮ್ರಾ ಯಾತ್ರೆಗೆ ತೆರಳಿದ್ದ ಪಟ್ಟಣದ ಯಲ್ಲಾಪುರ ರಸ್ತೆಯ ರೋಣ ಕುಟುಂಬದ ಮೂವರು ಸದಸ್ಯರು, ಸೌದಿ ಅರೇಬಿಯಾದ ಮದಿನಾ ಸಮೀಪ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇಲ್ಲಿನ ರೋಣ ಮೆಡಿಕಲ್ಸ್ ಮಾಲೀಕ ಫಯಾಜ ಅಹ್ಮದ ರೋಣ (46), ಪತ್ನಿ ಆಫ್ರೀನಾಬಾನು (42) ಹಾಗೂ ಸಹೋದರನ ಮಗ ಐವಾನ್ ರೋಣ (16) ಮೃತಪಟ್ಟವರು.
ಮಾ.26ರಂದು ಫಯಾಜ್ ಅಹ್ಮದ ರೋಣ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ, ಹೈದ್ರಾಬಾದ್ ಮೂಲಕ ಉಮ್ರಾ ಯಾತ್ರೆಗೆ ತೆರಳಿದ್ದರು. ಉದ್ಯೋಗ ನಿಮಿತ್ತ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ತಮ್ಮ ಸಹೋದರ ಇಮ್ತಿಯಾಜ್ ಕುಟುಂಬದೊಂದಿಗೆ ಜತೆಗೂಡಿ, ಏ.6ರಂದು ಮದಿನಾ ದರ್ಶನಕ್ಕೆ ಹೋಗುತ್ತಿರುವಾಗ, ಅವರು ಪ್ರಯಾಣಿಸುತ್ತಿದ್ದ ಕಾರಿನ ಟೈಯರ್ ಸಿಡಿದು ಅಪಘಾತವಾಗಿದೆ. ಕಾರಿನಲ್ಲಿ ಕುಟುಂಬದ ಒಂಬತ್ತು ಸದಸ್ಯರು ಪ್ರಯಾಣಿಸುತ್ತಿದ್ದರು. ಸ್ಥಳದಲ್ಲಿಯೇ ಮೂರು ಜನರು ಮೃತಪಟ್ಟಿದ್ದು, ಉಳಿದವರು ಗಾಯಗೊಂಡು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ರೋಣ ಕುಟುಂಬ ಮೂಲಗಳು ತಿಳಿಸಿವೆ.
ಗಾಯಗೊಂಡವರು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಅಲ್ಲಿಯೇ ಮಾಡಲು ನಿರ್ಧರಿಸಲಾಗಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.