ಮುಂಡಗೋಡ: ತಾಲ್ಲೂಕಿನ ಗುಂಜಾವತಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗವಾನಿ ಮರಗಳನ್ನು ಕತ್ತರಿಸಿ, ದಿಮ್ಮಿಗಳನ್ನು ಸಾಗಿಸಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ವಾಹನ ಸಮೇತ ಇಲ್ಲಿನ ಅರಣ್ಯ ಸಿಬ್ಬಂದಿ ಭಾನುವಾರ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಇನಾಮ ಮುತ್ತಳ್ಳಿಯ ಕರೆಪ್ಪ ದುರ್ಗಪ್ಪ ಹುಬ್ಬಳ್ಳಿ (37) ಹಾಗೂ ಏಕಾಂತ ಲಕ್ಷಪ್ಪ ಹುಲ್ಲತ್ತಿ (36) ಬಂಧಿತ ಆರೋಪಿಗಳು.
ಜೂನ್ 12ರಂದು ಗುಂಜಾವತಿ ಅರಣ್ಯ ವ್ಯಾಪ್ತಿಯಲ್ಲಿ ಮೂರು ಹಸಿ ಸಾಗವಾನಿ ಮರಗಳನ್ನು ಕಡಿದು, ತುಂಡುಗಳನ್ನು ಸಾಗಿಸಲು ಆಗದೇ, ರಸ್ತೆ ಬದಿಯಲ್ಲಿ ಒಟ್ಟು 12 ತುಂಡುಗಳನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಇಲ್ಲಿನ ಅರಣ್ಯ ಸಿಬ್ಬಂದಿ, ಒಟ್ಟು 2.45 ಘನ ಮೀಟರ್ ಸಾಗವಾನಿ ಸೇರಿದಂತೆ 1 ಮೀಟರ್ ಜಲಾವು ಕಟ್ಟಿಗೆಯನ್ನು ಆ ಸ್ಥಳದಲ್ಲಿ ವಶಪಡಿಸಿಕೊಂಡಿದ್ದರು. ಘಟನೆ ನಡೆದ ರಾತ್ರಿಯಿಂದ ಬೆಳಗಿನ ಜಾವದವರೆಗೆ ಆ ಮಾರ್ಗದಲ್ಲಿ ಓಡಾಡಿರುವ ವಾಹನಗಳು ಹಾಗೂ ಮೊಬೈಲ್ ಕರೆಗಳ ಜಾಡು ಹಿಡಿದು ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬೊಲೆರೊ ವಾಹನ ಸಮೇತ ಇಬ್ಬರು ಆರೋಪಿಗಳನ್ನು ಶಿರಾಳಕೊಪ್ಪದಲ್ಲಿ ಬಂಧಿಸಲಾಗಿದೆ ಎಂದು ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ ಹೇಳಿದರು.
ವ್ಯವಸ್ಥಿತ ತಂಡ ಕಟ್ಟಿಕೊಂಡು ಆರೋಪಿಗಳು ಬೇರೆ ಬೇರೆ ಕಡೆ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು. ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯರ ಪಾತ್ರದ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಡಿಎಫ್ಒ ಎಸ್.ಜಿ. ಹೆಗಡೆ ಹೇಳಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ. ವಾಲಿ, ಆರ್ಎಫ್ಒ ಸುರೇಶ ಕುಳ್ಳೊಳ್ಳಿ, ಆರ್ಎಫ್ಒ ಮಂಜುನಾಥ ನಾಯ್ಕ, ಉಪವಲಯ ಅರಣ್ಯಾಧಿಕಾರಿಗಳಾದ ಫಕ್ಕೀರೇಶ ಸುಣಗಾರ, ಶ್ರೀಶೈಲ ಐನಾಪುರ, ಸಂತೋಷ ಕುರುಬರ, ಸುನಿತಾ ಬಿ.ಎಂ., ಶಂಕರ ಬಾಗೇವಾಡಿ, ಚಂದ್ರಕಾಂತ ಮುಕ್ರಿ, ಅರಣ್ಯ ಪಾಲಕರಾದ ಶ್ರೀಧರ ಭಜಂತ್ರಿ, ದೇವರಾಜ ಆಡಿನ್, ಮುಸ್ತಾಕಲಿ ಒಂಟಿ, ಮುತ್ತಣ್ಣ ಹಿರೇಕಣಗಿ, ಶಿವಪ್ಪ ಭೀಮರಾಯ, ಅಶೋಕ ಮೇಲಿನಮನಿ, ಬಸವರಾಜ ಹಾಗೂ ಚಾಲಕ ಶಿವಾನಂದ ಲಮಾಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.