ವಿಶೇಷ ದೀಪಾಲಂಕಾರದಲ್ಲಿ ದೇವರ ವಿಶ್ವರೂಪ ದರ್ಶನವನ್ನು ಕಂಡು ಭಕ್ತರು ಭಾವಪರವಶರಾದರು. ವೈಕುಂಠ ದ್ವಾರವನ್ನು ಪ್ರವೇಶಿಸಿದರೆ ಮೋಕ್ಷ ಸಿಗುವುದೆಂಬ ಪ್ರತೀತಿಯಿರುವ ಹಿನ್ನೆಲೆಯಲ್ಲಿ ದ್ವಾರ ಪ್ರವೇಶಿಸಿದ ಭಕ್ತರು, ಭಗವಂತನಲ್ಲಿ ಪ್ರಾರ್ಥಿಸಿದರು. ಸಾಕ್ಷಾತ್ ತಿರುಪತಿ ವೆಂಕಟರಮಣನ ಅಲಂಕಾರದ ಮಾದರಿಯಲ್ಲೇ ಇಲ್ಲಿನ ದೇವರಿಗೆ ಅಲಂಕಾರ ಮಾಡಲಾಗಿತ್ತು. ಅರ್ಚಕ ಕಿಶೋರ ಭಟ್ಟ ನೇತೃತ್ವದಲ್ಲಿ ರವಿ ಭಟ್ಟ, ಅನಂತ ಭಟ್ಟ, ಶಾಂತಾರಾಮ ಭಟ್ಟ ಅವರು ಹೂ ಮಾಲೆ ಅಲಂಕಾರ ಮಾಡಿದ್ದರು. ಸಂಜೆ ಭಕ್ತರು ಸಹಸ್ರಾಧಿಕ ನಂದಾದೀಪ ಬೆಳಗಿದರು. ವಿದ್ಯುತ್ ದೀಪಗಳನ್ನು ಆರಿಸಿ, ಎಣ್ಣೆ ದೀಪ, ತುಪ್ಪದ ದೀಪ ಬೆಳಕಿನಲ್ಲಿ ದೇವರ ದರ್ಶನ ಪಡೆದು ಪುನೀತರಾದರು.